ರಮೇಶ ಹಾರ್ಸಿಮನೆ ಸಿದ್ದಾಪುರ
ಕಳೆದ ವರ್ಷದ ಲಾಡ್ಡೌನ್ ವೇಳೆ ತವರೂರಿಗೆ ಮರಳಿ ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿ ಹಲವರು ಉತ್ತಮ ಜೀವನ ಕಂಡುಕೊಂಡಿದ್ದಾರೆ. ಜತೆಗೆ ಕೃಷಿ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಆ ಪಟ್ಟಿಗೆ ದಂತವೈದ್ಯ ಕಾನಳ್ಳಿಯ ವಿನಯ ನಾಯ್ಕ ಕೂಡ ಸೇರ್ಪಡೆಯಾಗಿದ್ದಾರೆ.
ವಾಜಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಳ್ಳಿಯ ವಿನಯ ನಾಯ್ಕ ಅವರು ಬೆಂಗಳೂರಿನಲ್ಲಿ ವೈದ್ಯರಾಗಿದ್ದರು. ಊರಿಗೆ ಮರಳಿದ ಅವರು ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಪಾಳು ಬಿದ್ದ ಒಂದು ಎಕರೆ ಗದ್ದೆಯಲ್ಲಿ ಸಿರಿ ಪದ್ಧತಿಯಲ್ಲಿ 20 ಕ್ವಿಂಟಾಲ್ ಭತ್ತ ಬೆಳೆದರು. ಮೊದಲ ಬೆಳೆಯಲ್ಲಿಯೇ ಯಶಸ್ಸು ಕಂಡಿದ್ದಾರೆ. ಈ ನಡುವೆ ಲಾಕ್ಡೌನ್ ಸಡಿಲಗೊಂಡಾಗ ದಂತ ವೈದ್ಯಕೀಯ ವೃತ್ತಿಯನ್ನು ಕಾರ್ಗಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆರಂಭಿಸಿ, ಬೇಸಿಗೆಯಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ಕಲ್ಲಂಗಡಿ ಬೆಳೆ ಕುರಿತು ತರಬೇತಿ ಪಡೆದರು. ಕಲ್ಲಂಗಡಿ ಬೆಳೆದು ತೃಪ್ತಿ ಹೊಂದಿದ್ದಾರೆ.
ಕೃಷಿಗೆ ಆಸಕ್ತಿ ಬೇಕು. ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ. ಕರೊನಾ ಲಾಕ್ಡೌನ್ನಿಂದ ವೃತ್ತಿಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ಅವಕಾಶ ಸಿಕ್ಕಂತಾಯಿತು. ಕೃಷಿ ಇಲಾಖೆ ಅಧಿಕಾರಿಗಳ ಸಮರ್ಪಕ ಮಾಹಿತಿ ಹಾಗೂ ಕುಟುಂಬ ಸದಸ್ಯರ ಸಹಕಾರ ದೊರೆತಿರುವುದು ಮತ್ತಷ್ಟು ಆಸಕ್ತಿ ಹೆಚ್ಚಿಸಿದೆ.
| ಡಾ. ವಿನಯ ನಾಯ್ಕ, ಕಾನಳ್ಳಿ
ವಿನಯ ನಾಯ್ಕ ಅವರು ಕೃಷಿ ಇಲಾಖೆಗೆ ಆಗಮಿಸಿ ಭತ್ತ ಕೃಷಿ ಕುರಿತು ಮಾಹಿತಿ ಪಡೆದುಕೊಂಡು ಉತ್ತಮ ಬೆಳೆ ಬೆಳೆದರು. ಅದರಂತೆ ಕಲ್ಲಂಗಡಿ ಬೆಳೆಯನ್ನು ಬೆಳೆಯುವುದಕ್ಕೆ ಆಸಕ್ತಿವಹಿಸಿ ಅದರಲ್ಲಿಯೂ ಉತ್ತಮ ಫಸಲು ತೆಗೆದಿದ್ದಾರೆ.
| ಉದಯಕುಮಾರ ತೆಂಬದ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಆತ್ಮ ಯೋಜನೆ ಸಿದ್ದಾಪುರ