ಬೆಂಗಳೂರು: ಸಾಫ್ಟ್ವೇರ್ ಇಂಜಿನಿಯ ಮನೆ ಕೆಲಸಕ್ಕೆ ಸೇರಿಕೊಂಡು ಮಾರನೇ ದಿನವೇ ಚಿನ್ನಾಭರಣ ದೋಚಿದ್ದ ಮುಂಬೈ ಮೂಲದ ಇಬ್ಬರು ಕಳ್ಳಿಯರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ವನಿತಾ (38) ಮತ್ತು ಯಶೋಧಾ (40) ಬಂಧಿತರು. 127 ಗ್ರಾಂ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ನ.27ರಂದು ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿ ಎಸ್ಜೆಆರ್ ಪ್ಲಾಜಾ ಸಿಟಿ ಅಪಾರ್ಟ್ಮೆಂಟ್ ನಿವಾಸಿ ಶೇಖರ್ ಆನಂದ್ ಎಂಬಾತನ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸವಿತಾ ಎಂಬಾಕೆ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಶೇಖರ್ ಆನಂದ್, ಪತ್ನಿ ಮತ್ತು ಮಕ್ಕಳೊಂದಿಗೆ ಪ್ಲ್ಯಾಟ್ನಲ್ಲಿ ನೆಲೆಸಿದ್ದಾರೆ. ನ.26ರಂದು ವನಿತಾ ಮತ್ತು ಸವಿತಾ ಮನೆಯ ಕೆಲಸಕ್ಕೆ ಸೇರಿದ್ದರು. ನ.27ರಂದು ಕೆಲಸಕ್ಕೆ ಬಂದಿದ್ದ ಇಬ್ಬರು ಮನೆಯ ಡ್ರಾಯರ್ನಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಮಾರನೇ ದಿನ ಇಬ್ಬರು ಕೆಲಸಕ್ಕೆ ಬಂದಿರಲಿಲ್ಲ. ಕರೆ ಮಾಡಿದಾಗ ಮೊಬೈಲ್ ಆಫ್ ಆಗಿತ್ತು.
ಡಿ.3ರಂದು ಶೇಖರ್ ಆನಂದ್ ಪತ್ನಿ ಡ್ರಾಯರ್ ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಂಧಿತರ ವಿರುದ್ಧ ಮುಂಬೈನ ವಿವಿಧ ಠಾಣೆಗಳಲ್ಲಿ 36 ಮನೆಗಳವು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿದ್ದು, ಜಾಮೀನು ಪಡೆದು ಹೊರಗೆ ಬಂದು ಮತ್ತೆ ಹಳೇ ಚಾಳಿ ಮುಂದುವರಿಸುತ್ತಿದ್ದರು. 2022ರಲ್ಲಿ ಹೆಣ್ಣೂರು ಪೊಲೀಸರು ವನಿತಾ ಮತ್ತು ಯಶೋಧಾ ಬಂಧಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ