ಎನ್.ಆರ್.ಪುರ: ಸಾರ್ವಜನಿಕರು, ಯುವಕರು ಪೊಲೀಸರೊಂದಿಗೆ ಸಂಪರ್ಕದಲ್ಲಿರಬೇಕು. ಗ್ರಾಮಗಳಲ್ಲಿ, ಪಟ್ಟಣದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮಾಹಿತಿ ನೀಡುವುದರ ಮೂಲಕ ಅಪರಾಧಮುಕ್ತ ಪಟ್ಟಣವನ್ನಾಗಿಸಲು ಸಹಕಾರ ನೀಡಬೇಕೆಂದು ಪಿಎಸ್ಐ ಶ್ರೀಗುರು ಸಜ್ಜನ್ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಯೂತ್ ಕಮಿಟಿ ಸಭೆಯಲ್ಲಿ ಮಾತನಾಡಿ, ವಾಹನ ಚಾಲನಾ ಪರವಾನಗಿ, ವಾಹನದ ದಾಖಲಾತಿಗಳು, ವಾಹನ ವಿಮೆ ಇಲ್ಲದೆ ವಾಹನಗಳನ್ನು ಚಲಾಯಿಸಬಾರದು. ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿಸಲು ಯುವಕರು ಸಹಕಾರ ನೀಡಬೇಕು ಎಂದು ಹೇಳಿದರು.
ತಾಲೂಕು ಕರವೇ ಅಧ್ಯಕ್ಷ ಹರ್ಷ ಮಾತನಾಡಿ, ಬಿ.ಎಚ್.ಕೈಮರ ಚೆಕ್ಪೋಸ್ಟ್ ಬಳಿ ಭಾರಿ ಗಾತ್ರದ ಟಿಂಬರ್ ತುಂಬಿದ ವಾಹನಗಳು ನಿಲ್ಲುವುದರಿಂದ ದಾರಿಯೇ ಕಾಣುವುದಿಲ್ಲ. ಬೇರೆ ವಾಹನಗಳ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಬಿ.ಎಚ್.ಕೈಮರ ಚೆಕ್ಪೋಸ್ಟ್ ಬಳಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಆಗಬೇಕೆಂದು ಒತ್ತಾಯಿಸಿದರು.
ಸೈಯದ್ಫರ್ವೀಜ್ ಮಾತನಾಡಿ, ಹಳೇ ಮಂಡಗದ್ದೆ ರಸ್ತೆಯ ಡಿಸಿಎಂಸಿ ಶಾಲೆ ಬಳಿ ಬೆಳಗ್ಗೆ ಹಾಗೂ ಸಂಜೆ ಟ್ರಾಫಿಕ್ ಜಾಮ್ ಆಗುತ್ತಿದೆ. ಶಾಲಾ ವಾಹನಗಳ ಚಾಲಕರ ಸಭೆ ಕರೆದು ನಿರ್ದೇಶನ ನೀಡಬೇಕು. ವಾಹನಗಳ ಕರ್ಕಶ ಹಾರನ್ನಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಎಸ್ಐ ತಿಳಿಸಿದರು.
ತಾಲೂಕು ಕರವೇ ಅಧ್ಯಕ್ಷ ಹರ್ಷ ಮಾತನಾಡಿ, ಕೆಲವು ದಿನಗಳಿಂದ ಮೂರ್ನಾಲ್ಕು ಮಹಿಳೆಯರು ಯಾವುದೋ ಟ್ರಸ್ಟ್, ಆಶ್ರಮದ ಹೆಸರೇಳಿಕೊಂಡು ದೇಣಿಗೆ ಬರುತ್ತಿದ್ದಾರೆ ಎಂದರು. ಶ್ರೀಗುರು ಸಜ್ಜನ್ ಮಾತನಾಡಿ, ಅಂಥವರು ಕಂಡುಬಂದಲ್ಲಿ ಕೂಡಲೇ ನಮಗೆ ಮಾಹಿತಿ ನೀಡಿ. ತುರ್ತು ಸಮಸ್ಯೆಗಳಿಗೆ 112 ಗೆ ಕರೆ ಮಾಡಿದಲ್ಲಿ ಸ್ಥಳಕ್ಕೇ ಪೊಲೀಸ್ ಸಿಬ್ಬಂಧಿ ಆಗಮಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂದರು.
ಕ್ರೈಂ ಪಿಎಸ್ಐ ಜ್ಯೋತಿ, ಪೊಲೀಸ್ ಸಿಬ್ಬಂದಿ ಮಧು, ಮಂಜುನಾಥ್, ಸ್ಥಳೀಯರಾದ ಬಿನುಅಲೆಕ್ಸ್, ಸಜಿ, ಚೇತನ್, ಶ್ರೀಧರ, ಸುಹೇಲ್, ಅಬ್ದುಲ್ರಜಾಕ್, ಹರೀಶ್ ಶೆಟ್ಟಿ, ರಾಬರ್ಟ್ ಸೈಯದ್ಫರ್ವೀಜ್, ಸುದೀಪ್, ಹರ್ಷ ಇತರರಿದ್ದರು.