ತರೀಕೆರೆ: ದಲಿತ ಯುವಕನ ಮೇಲಿನ ಹಲ್ಲೆ ಹಾಗೂ ಜಾತಿನಿಂದನೆ ಪ್ರಕರಣದಿಂದ ಬೂದಿ ಮುಚ್ಚಿದ ಕೆಂಡದಂತಾಗಿರುವ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಗೆ ಗುರುವಾರ ಚಿತ್ರದುರ್ಗ ಯಾದವ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಸಮಸ್ಯೆ ಆಲಿಸಿದರು.
ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸಲು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲರ ಸಹಕಾರದಿಂದ ಶೀಘ್ರವೇ ಪ್ರಕರಣ ಸುಖಾಂತ್ಯ ಕಾಣಲಿದೆ. ಯಾರೂ ಎದೆಗುಂದದಿರಿ ಎಂದು ಆತ್ಮಸ್ಥೈರ್ಯ ತುಂಬಿದರು.
ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ದೇಗುಲ ಪ್ರವೇಶಕ್ಕೆ ಯಾವುದೇ ಅಡ್ಡಿಯಿಲ್ಲ. ಗರ್ಭಗುಡಿ ಪ್ರವೇಶಕ್ಕೆ ಕೆಲವು ಸಂಪ್ರದಾಯ ಪಾಲನೆ ಅವಶ್ಯ. ಸಮಾಜ ಆಧೂನೀಕರಣದತ್ತ ಹೊರಳಿದೆ. ಸಮಾಜ ಬದಲಾದಂತೆ ನಮ್ಮ ಸಂಪ್ರದಾಯ, ಆಚರಣೆಗಳನ್ನೂ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ. ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಈ ಘಟನೆಯಿಂದ ಯಾರೂ ವಿಚಲಿತರಾಗುವುದು ಬೇಡ ಎಂದರು.
ಎಸಿ ಕಛೇರಿಗೆ ಭೇಟಿ:
ಗೊಲ್ಲರಹಟ್ಟಿ ನಿವಾಸಿಗಳೊಂದಿಗೆ ಸಮಾಲೋಚಿಸಿದ ಬಳಿಕ ಎಸಿ ಕಚೇರಿಗೆ ತೆರಳಿದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ಕೆ.ಪೂರ್ಣಿಮಾ ಅವರು ಎಸಿ ಡಾ. ಕೆ.ಜೆ.ಕಾಂತರಾಜ್ ಜತೆ ಮಾತನಾಡಿದರು. ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಾನೂನು ಪಾಲನೆ ಆಚರಿಸಿ. ಆದರೆ ಧಾರ್ಮಿಕ ಭಾವನೆಗಳಗೆ ಧಕ್ಕೆಯಾಗಬಾರದು. ಚರ್ಚೆ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಬೇಕಾದ ಕ್ರಮ ಕೈಗೊಳ್ಳುವುದು ಸೂಕ್ತ ಎಂದರು.
ಗೊಲ್ಲ ಸಮುದಾಯದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಉಪಾಧ್ಯಕ್ಷ ಸಿದ್ದಪ್ಪ, ಜಿಲ್ಲಾಧ್ಯಕ್ಷ ಬಸವರಾಜ, ತಾಲೂಕು ಅಧ್ಯಕ್ಷ ಸತೀಶ್ ಇತರರಿದ್ದರು.