ನವದೆಹಲಿ: ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದ ಇಬ್ಬರನ್ನು ಇಲ್ಲಿನ ಕೆಂಪುಕೋಟೆ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಮಹಾರಾಷ್ಟ್ರದ ಖಾಲಿದ್ ಮುಬಾರಕ್ ಖಾನ್ (21) ಮತ್ತು ತಮಿಳುನಾಡಿನ ಅಬ್ದುಲ್ಲಾ ಅಲಿಯಾಸ್ ಅಬ್ದುರ್ ರೆಹಮಾನ್ (26) ಎಂದು ಗುರುತಿಸಲಾಗಿದೆ. ಪಾಕ್ ಮೂಲದ ಹ್ಯಾಂಡ್ಲರ್ನಿಂದ ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರು ಉತ್ತೇಜನ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಕ್ರಮವಾಗಿ ಗಡಿ ದಾಟುವ ಮಾರ್ಗಗಳ ಕುರಿತು ಇಬ್ಬರು ವ್ಯಕ್ತಿಗಳು ತಮ್ಮ ಹ್ಯಾಂಡ್ಲರ್ನಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದರು. ಅವರ ವಶದಿಂದ 10 ಜೀವಂತ ಕಾಟ್ರಿಡ್ಜ್ಗಳು, ಒಂದು ಚಾಕು ಮತ್ತು ವೈರ್ ಕಟರ್ ಹಾಗೂ ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪಾಕ್ ಮೂಲದ ಹ್ಯಾಂಡ್ಲರ್ಗಳು ಕೆಲವು ಜನರನ್ನು ತೀವ್ರಗಾಮಿಗಳಾಗಿಸುತ್ತಿದ್ದಾರೆ ಮತ್ತು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಕಾರ್ಯಗತಗೊಳಿಸುವ ಮೊದಲು ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆಯಲು ನಿರ್ದೇಶನಗಳನ್ನು ನೀಡಲಾಯಿತು ಎಂಬ ಇನ್ಪುಟ್ಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರ ವಿಶೇಷ ಸೆಲ್ ಈ ಬಂಧನಗಳನ್ನು ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಫೆ.14 ರಂದು, ಪಾಕಿಸ್ತಾನ ಮೂಲದ ತಮ್ಮ ಹ್ಯಾಂಡ್ಲರ್ ಸಹಾಯದಿಂದ ಕೆಲವು ಉಗ್ರಗಾಮಿಗಳು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಮುಂಬೈ ಮೂಲಕ ದೆಹಲಿಗೆ ಬಂದು ಭಯೋತ್ಪಾದಕ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗುತ್ತಾರೆ ಎಂಬ ಮಾಹಿತಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ವಿಶೇಷ ಸೆಲ್) ಸಹಾಯದಿಂದ ಮಾಹಿತಿ ಸಿಕ್ಕಿತು ಎಂದು ರಾಜೀವ್ ರಂಜನ್ ಸಿಂಗ್ ಹೇಳಿದರು.
ಮಾಹಿತಿಯ ಪ್ರಕಾರ, ಅವರಿಬ್ಬರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಕೆಂಪು ಕೋಟೆಯ ಹಿಂಭಾಗದ ರಿಂಗ್ ರೋಡ್ ಬಳಿ ಬರಬೇಕಿತ್ತು. ಅವರ ಬಂಧನದ ನಂತರ ಫೆ.15 ರಂದು ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಭಯೋತ್ಪಾದನಾ ದಾಳಿಯ ಯೋಜನೆಯಲ್ಲಿ ಆರೋಪಿಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು. (ಏಜೆನ್ಸೀಸ್)