ತೇರದಾಳ: ಪಟ್ಟಣದ ಗುರುಕುಲ ಆವರಣದ ಸಮುದಾಯ ಭವನದಲ್ಲಿ ಕ್ವಾರಂಟೈನ್ ಆದ 24 ಮಕ್ಕಳು ಸೇರಿ ಒಟ್ಟು 71 ಜನರ ಗಂಟಲು ದ್ರವ ಸಂಗ್ರಹ ಪ್ರಕ್ರಿಯೆ ಕಾರ್ಯ ಶನಿವಾರ ಸಂಜೆ ನಡೆಯಿತು.
ಪಟ್ಟಣದ ತಾಂಡಾ ನಿವಾಸಿಗಳು ಮಹಾರಾಷ್ಟ್ರದ ಪಲೂಸ್ ಹಾಗೂ ಗಡಹಿಂಗ್ಲಜ ಭಾಗಕ್ಕೆ ರಸ್ತೆ ಗಾರೆ ಕೆಲಸಕ್ಕೆ ಹೋಗಿದ್ದರು. ಕೂಲಿಗಾಗಿ ಮಹಾರಾಷ್ಟ್ರಕ್ಕೆ ಹೋದವರು ಲಾಕ್ಡೌನ್ದಿಂದ ಅಲ್ಲಿಯೇ ಸಿಲುಕಿಕೊಂಡಿದ್ದರು. ಸರ್ಕಾರ ಅಂತಾರಾಜ್ಯ ಕಾರ್ಮಿಕರ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆ ಮೇ 12 ಹಾಗೂ 13ರಂದು ಪಟ್ಟಣಕ್ಕೆ ಆಗಮಿಸಿದ್ದರು.
ಬನಹಟ್ಟಿ ಆಸ್ಪತ್ರೆ ಸಹಾಯಕ ವೈದ್ಯ ಅಪ್ಪಾಜಿ ಹೂಗಾರ ಮತ್ತು ಸಿಬ್ಬಂದಿ ಹಾಗೂ ಸ್ಥಳಿಯ ಆಸ್ಪತ್ರೆ ಸಿಬ್ಬಂದಿ ಗಂಟಲು ದ್ರವ ಸಂಗ್ರಹ ಮಾಡಿದರು. ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಮಠಪತಿ, ಮಹಾದೇವ ಯಲ್ಲಟ್ಟಿ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.