ಹೈದರಾಬಾದ್: ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲವಾದರೆ, ಜ್ವರ, ಕೆಮ್ಮು ಮತ್ತು ಮೈಕೈ ನೋವು ಇದ್ದರೂ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದಿರಲು ತೆಲಂಗಾಣದ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯರು ನಿರ್ಧರಿಸಿದ್ದಾರೆ. ಅವರ ಈ ಕ್ರಮದ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.
ಪದ್ಮಪ್ರಿಯಾ ಎಂಬ ಮಹಿಳೆ ಇತ್ತೀಚೆಗೆ ಜ್ವರ, ಕೆಮ್ಮ ಮತ್ತು ಮೈಕೈ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಲು ನಿರ್ಧರಿಸಿ, ಸಹಾಯವಾಣಿಯನ್ನು ಸಂಪರ್ಕಿಸಿದ್ದರು. ಕಿಂಗ್ ಕೋಟಿ ಆಸ್ಪತ್ರೆಗೆ ಬರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದರು.
ಅದರಂತೆ ಅವರು ಆಸ್ಪತ್ರೆಗೆ ತೆರಳಿ, ಕೋವಿಡ್ ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಂಡರು. ಆದರೆ, ನೀವು ಬೇರಾವುದೇ ದೇಶಕ್ಕೆ ಹೋಗಿಬಂದಿಲ್ಲ. ಹಾಗಾಗಿ ನಿಮ್ಮನ್ನು ಪರೀಕ್ಷಿಸುವ ಅವಶ್ಯಕತೆ ಇಲ್ಲ ಎಂದು ಹೇಳಿ ವೈದ್ಯರು ಅವರನ್ನು ಸಾಗಹಾಕಿದರು ಎನ್ನಲಾಗಿದೆ.
ಹಿರಿಯ ಪತ್ರಕರ್ತೆಯಾಗಿರುವ ಪದ್ಮಪ್ರಿಯಾ ತಮ್ಮ ಈ ಅನುಭವವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಒಂದು ವೇಳೆ ನಿಮಗೆ ಕರೊನಾ ಸೋಂಕು ತಗುಲಿದರೂ ಹೆದರುವ ಅವಶ್ಯಕತೆ ಇಲ್ಲ. ನೀವಿನ್ನೂ ಸಣ್ಣ ವಯಸ್ಸಿನವರಾಗಿದ್ದು, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಆದ್ದರಿಂದ ಅದು ಕರೊನಾ ಸೋಂಕಿನ ವಿರುದ್ಧ ತಾನೇ ತಾನಾಗಿ ಹೋರಾಡಿ ಗೆಲ್ಲುತ್ತದೆ ಎಂದು ವೈದ್ಯರು ಹೇಳಿದ್ದಾಗಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ತೀವ್ರತರದ ಉಸಿರಾಟದ ತೊಂದರೆ ಇದ್ದರೆ ಮಾತ್ರ ಮತ್ತೆ ಆಸ್ಪತ್ರೆಗೆ ಬನ್ನಿ. ಇಲ್ಲವಾದರೆ, ನಾವು ಬರೆದುಕೊಟ್ಟಿರುವ ಆ್ಯಂಟಿಬಯಾಟಿಕ್ ತೆಗೆದುಕೊಳ್ಳಿ ಸಾಕು ಎಂದು ಹೇಳಿ ತಮ್ಮನ್ನು ಸಾಗಹಾಕಿದ್ದಾಗಿ ಹೇಳಿದ್ದಾರೆ.
ನಾನು ಆಸ್ಪತ್ರೆಯಲ್ಲಿ 40 ನಿಮಿಷ ಇದ್ದೆ. ಈ ಅವಧಿಯಲ್ಲಿ ಕರೊನಾ ಸೋಂಕಿನ ಲಕ್ಷಣಗಳುಳ್ಳ ಹಲವರು ಬಂದರು. ಆದರೆ, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕವಾಗಲಿ ಅಥವಾ ವಿದೇಶಿ ಪ್ರವಾಸದ ಹಿನ್ನೆಲೆಯಾಗಲಿ ಇಲ್ಲ ಎಂದು ಹೇಳಿ ಅವರೆಲ್ಲರಿಗೂ ಕೋವಿಡ್ ಟೆಸ್ಟ್ ಅನ್ನು ನಿರಾಕರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.
ಪದ್ಮಪ್ರಿಯಾ ಅವರ ಟ್ವೀಟ್ ವೈರಲ್ ಆದ ಬಳಿಕ ಅವರನ್ನು ಸಂಪರ್ಕಿಸಿದ ಕಿಂಗ್ ಕೋಟಿ ಆಸ್ಪತ್ರೆಯ ವೈದ್ಯರು, ಟೆಸ್ಟ್ಗೆ ಬರುವಂತೆ ತಿಳಿಸಿದರು. ಅದರಂತೆ ಅಲ್ಲಿಗೆ ಹೋದಾಗ, ಕೋವಿಡ್ ಟೆಸ್ಟ್ ಮಾಡಿದ್ದಾಗಿ ತಿಳಿಸಿದ್ದಾರೆ.
ಗುಜರಾತ್ನಲ್ಲಿ ಲಾಕ್ಡೌನ್ ಉಲ್ಲಂಘಿಸಿದ್ದಕ್ಕೆ ಒಂದೇ ದಿನದಲ್ಲಿ ಗರಿಷ್ಠ ವಾಹನಗಳ ಜಪ್ತಿ, 5 ಸಾವಿರಕ್ಕೂ ಹೆಚ್ಚು ಜನರ ಬಂಧನ