ಲಖನೌ: ಮದುವೆ ದಿಬ್ಬಣದಲ್ಲಿ ಡ್ಯಾನ್ಸ್ ಆಡುವ ವಿಚಾರವಾಗಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯ ಮಾಧವಪುರ ಬೆಳವಾಯಿ ಎಂಬ ಗ್ರಾಮದಲ್ಲಿ ನಡೆದಿದೆ.
ಘಟನೆಯು ಶುಕ್ರವಾರ ರಾತ್ರಿ 9:30ರ ಸುಮಾರಿಗೆ ನಡೆದಿದ್ದು, ಮೃತ ದುರ್ದೈವಿಯನ್ನು ಸೂರಜ್ (17) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಐದು ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ಈ ಕುರಿತು ಪ್ರತಿಕ್ರಿಯಿಸಿರುವ ಬೆಳವಾಯಿ ಪೊಲೀಸ್ ಠಾಣಾಧಿಕಾರಿ ಶೈಲೇಂದ್ರ ಪ್ರತಾಪ್ ಸಿಂಗ್, ಬೆಳವಾಯಿ ಗ್ರಾಮದ ನಿವಾಸಿ ಶ್ಯಾಮ್ಲಾಲ್ ಅವರ ನಿವಾಸದಲ್ಲಿ ಘಟನೆ ನಡೆದಿದ್ದು, ಡ್ಯಾನ್ಸ್ ಆಡುವ ವಿಚಾರವಾಗಿ ವರನ ಮತ್ತು ವಧುವಿನ ಕಡೆಯವರಿಗೆ ಗಲಾಟೆಯಾಗಿದೆ. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಸೂರಜ್ ಸಹೋದರ ಸಚಿನ್ನನ್ನು ಥಳಿಸಿದ್ದಾನೆ.
ಹಲ್ಲೆ ಮಾಡಿರುವ ಬಗ್ಗೆ ಸಚಿನ್ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದು, ಈ ಬಗ್ಗೆ ವಿಚಾರಿಸಲು ತೆರಳಿದಾಗ ಆತನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಸಚಿನ್ ಹಾಗೂ ಅಜಯ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳವಾಯಿ ಪೊಲೀಸ್ ಠಾಣಾಧಿಕಾರಿ ಶೈಲೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.