ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಮರೆಡ್ಡಿ ಮೂಲದ ಸಾಫ್ಟ್ವೇರ್ ಉದ್ಯೋಗಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗಸ್ಟ್ 7ರಂದು ಬೆಂಗಳೂರಿನಲ್ಲಿ ನಡೆದಿದೆ.
ಮೃತಳನ್ನು ಸರಣ್ಯ (25) ಎಂದು ಗುರುತಿಸಲಾಗಿದೆ. ಈಕೆ ತನ್ನ ಕ್ಲಾಸ್ಮೇಟ್ ರೋಹಿತ್ ಎಂಬುವನೊಂದಿಗೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದಳು. ಇಬ್ಬರು ಸಹ ಕಾಮರೆಡ್ಡಿ ಮೂಲದವರಾಗಿದ್ದರು. ಕಳೆದ ಒಂದು ವರ್ಷದಿಂದ ಉದ್ಯೋಗನಿಮಿತ್ತ ಬೆಂಗಳೂರಿನಲ್ಲಿ ವಾಸವಿದ್ದರು.
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ನಂತರ ದಿನಗಳಲ್ಲಿ ರೋಹಿತ್ ಮದ್ಯ ವ್ಯಸನಿಯಾಗಿದ್ದ. ಅಲ್ಲದೆ, ಸರಣ್ಯ ಮೇಲೆಯೂ ಆತ ಅನೇಕ ಬಾರಿ ಹಲ್ಲೆ ಮಾಡಿದ್ದರಿಂದ ಆಕೆ ತವರಿಗೂ ಆಗಮಿಸಿದ್ದಳು. ಬಳಿಕ ಸ್ಥಳೀಯ ನ್ಯಾಯಾಲಯದಲ್ಲಿ ಇಬ್ಬರು ರಾಜಿ ಮಾಡಿಕೊಂಡಿದ್ದರು. 3 ತಿಂಗಳ ಹಿಂದೆ ಮತ್ತೆ ಬೆಂಗಳೂರಿಗೆ ಮರಳಿದ್ದರು ಎಂದು ಸರಣ್ಯ ಕುಟುಂಬದವರು ತಿಳಿಸಿದ್ದಾರೆ.
ಬೆಂಗಳೂರಿಗೆ ಮರಳಿ ಬಂದಾಗಲೂ ಕೆಲವು ದಿನಗಳವರೆಗೆ ಸುಮ್ಮನಿದ್ದ ರೋಹಿತ್ ಮತ್ತೆ ತನ್ನ ಹಳೆ ವರಸೆ ತೆಗೆದಿದ್ದಾನೆ. ಇದರಿಂದ ಮನನೊಂನ ಸರಣ್ಯ ಆತ್ಮಹತ್ಯೆ ಹಾದಿ ತುಳಿದಿದ್ದಾಳೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದು, ರೋಹಿತ್ಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)