ಬೆಂಗಳೂರು: ಭಾರತದಲ್ಲಿ ಮುಸ್ಲೀಮರ ಹಕ್ಕಿಗೆ ಯಾವ ಕೊರತೆಯೂ ಉಂಟಾಗಿಲ್ಲ. ಆದರೂ ಪದೇ ಪದೆ ಹಕ್ಕು ಹರಣವಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಹಕ್ಕು ಪ್ರತಿಪಾದಿಸುವವರಿಗೆ ಕರ್ತವ್ಯದ ಪಾಠವನ್ನು ಕಲಿಸಿಕೊಡಬೇಕಿದೆ ಎಂದು ಹಿಂದು ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಮುಸ್ಲೀಮರಿಗೆ ದೇಶದ ಆರ್ಥಿಕತೆಯಲ್ಲಿ ವಿಶೇಷ ಹಕ್ಕು ಕಲ್ಪಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಇದು ಓಲೈಕೆ ರಾಜಕಾರಣ ಅಲ್ಲದೆ ಮತ್ತೇನೂ ಅಲ್ಲ. ಮಹಾತ್ಮಗಾಂಧಿ, ಜವಾಹರಲಾಲ್ ನೆಹರು ಅವರ ಮುಸ್ಲಿಂ ತುಷ್ಟೀಕರಣದ ನೀತಿಯಿಂದಾಗಿ ಭಾರತವು ವಿಭಜನೆಗೊಂಡು ಜಗತ್ತಿನ ಭೂಪಟದಲ್ಲಿ ಎರಡು ಮುಸ್ಲಿಂ ದೇಶಗಳು ಹುಟ್ಟಿಕೊಂಡವು. ಈಗ ಮತ್ತೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿ ಮತ್ತೊಂದು ಮುಸ್ಲಿಂ ದೇಶ ಹುಟ್ಟಲು ಕುಮ್ಮಕ್ಕು ನೀಡುತ್ತಿರುವಂತಿದೆ. ಹೀಗಾಗದಿರಲು ಹಕ್ಕಿನ ಸೊಕ್ಕಿಗೆ ಕಡಿವಾಣ ಹಾಕಿ ಕರ್ತವ್ಯದ ಪ್ರಜ್ಞೆಯನ್ನು ಮೂಡಿಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಮತಾಂಧರ ಕಪಿಮುಷ್ಟಿಯಲ್ಲಿ ಸಿದ್ದರಾಮಯ್ಯ?:
ಮುಖ್ಯಮಂತ್ರಿಯವರ ಹೇಳಿಕೆ ಹಾಗೂ ಆ ವಿಚಾರವಾಗಿ ಸಮರ್ಥಿಸಿಕೊಂಡಿರುವುದನ್ನು ನಮ್ಮ ಸಮಾಜವು ಹಗುರವಾಗಿ ಪರಿಗಣಿಸಬಾರದು. ಮೇಲ್ನೋಟಕ್ಕೆ ಅದು ಅವಿವೇಕಿ ರಾಜಕೀಯ ಹೇಳಿಕೆ ಎಂಬುದಾಗಿ ಕಂಡರೂ, ಮುಸ್ಲಿಂ ಮೂಲಭೂತವಾದಿಗಳ ಕೈಗೊಂಬೆಯಾಗಿರುವಂತಿದೆ. ಅಲ್ಲದೆ ಈ ಶಕ್ತಿಗಳು 2047ರ ವೇಳೆಗೆ ಭಾರತದ ಇಸ್ಲಾಮೀಕರಣದ ಯೋಜನೆಗೆ ಕೈಜೋಡಿಸುವುದಕ್ಕೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಜಗದೀಶ್ ಕಾರಂತ್ ಆರೋಪಿಸಿದ್ದಾರೆ.