ದಾವಣಗೆರೆ: ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ತಾಯಿಟೋಣಿ ಗ್ರಾಮದ ಕೆರೆ ಸೇರ್ಪಡೆಯಾಗಿದೆ. ಕೆರೆ ಒತ್ತುವರಿ ಮಾಡಿಕೊಂಡಿರುವ ಕೆಲ ಪ್ರಭಾವಿಗಳು ನೀರು ತುಂಬಿಸಲು ಅಡ್ಡಿಪಡಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಮಂಗಳವಾರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿಪತ್ರ ಸಲ್ಲಿಸಿದರು.
57 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಊರಿನ ಕೆರೆಗೆ ನೀರೊದಗಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆ ಬಳಿ ಪೈಪ್ ಇಳಿಸಿದರೆ ಪ್ರಭಾವಿಗಳು ದೌರ್ಜನ್ಯ ಮಾಡಿ ಹಿಂದಕ್ಕೆ ಕಳಿಸಿದ್ದಾರೆ. ಕೆರೆ ನಮ್ಮ ಹೆಸರಿಗಿದೆ ಎಂದು ವಾದ ಮಾಡುತ್ತಿದ್ದಾರೆ. ತಹಸೀಲ್ದಾರ್ ಭೇಟಿ ನೀಡಿದ್ದರೂ ಉಪಯೋಗವಾಗಿಲ್ಲ.
ಕೂಡಲೇ ತಾವು ಮಧ್ಯಪ್ರವೇಶಿಸಿ ಜನ-ಜಾನುವಾರುಗಳಿಗೆ ಕುಡಿಯಲು ಹಾಗೂ ನೀರಾವರಿಗೆ ಅನುಕೂಲವಾಗುವಂತೆ, ಕೆರೆಯ ಒತ್ತುವರಿ ತೆರವು ಮಾಡಿಸಬೇಕೆಂದು ಮನವಿ ಮಾಡಿದರು. ಗ್ರಾಮಕ್ಕೆ ನೀರೊದಗಿಸುವಲ್ಲಿ ಯಾವುದೇ ಹಿಂದೇಟಿಲ್ಲ ಎಂದು ಡಿಸಿ ಪ್ರತಿಕ್ರಿಯಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಚಿರಂಜೀವಿ, ರಾಜು, ಸತೀಶ್, ಮಡ್ರಳ್ಳಿ ತಿಪ್ಪಣ್ಣ, ಸಹದೇವ ರೆಡ್ಡಿ, ಮಾಧುರೆಡ್ಡಿ, ಮಂಜಣ್ಣ ಹನುಮಂತಪ್ಪ ಹಾಗೂ ತಾಯಿಟೋಣಿ ಗ್ರಾಮಸ್ಥರಿದ್ದರು.