ನವದೆಹಲಿ: ಸದ್ಯ ನಟಿಯಾಗಿ ಬದಲಾಗಿರುವ ಮಾಜಿ ತೆರಿಗೆ ಅಧಿಕಾರಿ ಕೃತಿ ವರ್ಮಾ ಅವರು 250 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದು, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತನಿಖೆಯನ್ನು ಎದುರಿಸುತ್ತಿದ್ದಾರೆ.
ಕೃತಿ ವರ್ಮಾ ಅವರು ರೋಡಿಸ್ ಮತ್ತು ಬಿಗ್ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅಕ್ರಮ ಹಣ ವರ್ಗಾವಣೆ ನಿಧಿಯನ್ನು ಸ್ವೀಕರಿಸಿರುವ ಆರೋಪ ಅವರ ಮೇಲಿದೆ. ಇಷ್ಟೇ ಅಲ್ಲದೆ, ಆದಾಯ ತೆರಿಗೆ ಇಲಾಖೆಯ ತೆರಿಗೆ ಮರುಪಾವತಿಯ ವಂಚನೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳೊಂದಿಗೆ ಕೃತಿ ಸಂಪರ್ಕವನ್ನು ಹೊಂದಿರುವ ಆಪಾದನೆ ಇದೆ. ಈಗಾಗಲೇ ಕೃತಿ ಅವರನ್ನು ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಕರೆದು ವಿಚಾರಣೆ ನಡೆಸಿದ್ದಾರೆ.
ಕಳೆದ ವರ್ಷ ಕೇಂದ್ರೀಯ ತನಿಖಾ ದಳ (ಸಿಬಿಐ)ವು, ಆದಾಯ ತೆರಿಗೆ ಇಲಾಖೆಯ ಹಿರಿಯ ತೆರಿಗೆ ಸಹಾಯಕ ತಾನಾಜಿ ಮಂಡಲ್ ಅಧಿಕಾರಿ, ಉದ್ಯಮಿ ಪನ್ವೇಲ್ ಭೂಷಣ್ ಅನಂತ್ ಪಾಟೀಲ್ ಮತ್ತು ಇತರರ ವಿರುದ್ಧ ತೆರಿಗೆ ಮರುಪಾವತಿಯನ್ನು ವಂಚಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿತು. ಇದಾದ ಬಳಿಕ ಸಿಬಿಐ ದೆಹಲಿಯಲ್ಲಿ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್ಎ) ಅಡಿಯಲ್ಲಿ ಇಡಿ ತನಿಖೆ ಆರಭಿಸಿತು.
ಪ್ರಕರಣದ ಪ್ರಮುಖ ಆರೋಪಿ ತಾನಾಜಿ ಮಂಡಲ ಅಧಿಕಾರಿ, ಆದಾಯ ತೆರಿಗೆ ಇಲಾಖೆಯಲ್ಲಿ ಹಿರಿಯ ತೆರಿಗೆ ಸಹಾಯಕರಾಗಿ ಕೆಲಸ ಮಾಡುವಾಗ RSA ಟೋಕನ್ಗಳು ಮತ್ತು ಅವರ ಮೇಲ್ವಿಚಾರಣಾ ಅಧಿಕಾರಿಗಳ ಲಾಗಿನ್ ಕ್ರೆಡಿನ್ಸಿಯಲ್ ಅನ್ನು ಹೊಂದಿದ್ದರು. ಈ ಮೂಲಕ ಇತರರೊಂದಿಗೆ ಸೇರಿ ವಂಚನೆ ಜಾಲ ಸೃಷ್ಟಿ ಮಾಡಿಕೊಂಡಿದ್ದರು. ಭೂಷಣ್ ಅನಂತ್ ಪಾಟೀಲ್ ಸಂಪರ್ಕದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಈ ವಿಚಾರ ಗಮನಕ್ಕೆ ಬಂದಾಗ ಐಡಿ ಕಾಯ್ದೆ 2000 ಅಡಿಯಲ್ಲಿ ತಾನಾಜಿ ಮಂಡಲ ಅಧಿಕಾರಿ, ಅನಂತ್ ಪಾಟೀಲ್, ರಾಜೇಶ್ ಶಾಂತರಾಮ್ ಶೆಟ್ಟಿ ಸೇರಿದಂತೆ ಅನೇಕರ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು.
ಪಿಎಂಎಲ್ಎ ಅಡಿಯಲ್ಲಿ ಇಡಿ ನಡೆಸಿದ ತನಿಖೆಯಲ್ಲಿ 2019ರ ನವೆಂಬರ್ 15 ರಿಂದ 2020ರ ನವೆಂಬರ್ 4ರ ನಡುವೆ 12 ವಂಚನೆಯ TDS ಮರುಪಾವತಿಗಳನ್ನು ತಾನಾಜಿ ಮಂಡಲ ಅಧಿಕಾರಿ ರಚಿಸಿದ್ದಾರೆ ಎಂಬುದು ತಿಳಿಯಿತು. ಅಲ್ಲದೆ, ಅದರ ಮೊತ್ತ 263.95 ಕೋಟಿ ರೂ. ಎಂಬುದು ತನಿಖೆಯಲ್ಲಿ ಬಯಲಾಯಿತು. ಈ ವಂಚನೆಯಲ್ಲಿ ಬಂದ ಆದಾಯವನ್ನು ಉದ್ಯಮಿ ಪಾಟೀಲ್ ಮತ್ತು ಇತರ ಸಂಬಂಧಿತ ವ್ಯಕ್ತಿಗಳು ಮತ್ತು ಘಟಕಗಳ ಬ್ಯಾಂಕ್ ಖಾತೆಗಳಿಗೆ ಮತ್ತು ಶೆಲ್ ಕಂಪನಿಗಳಿಗೆ ವರ್ಗಾಯಿಸಲಾಗಿತ್ತು.
ಇಡಿ ಕಳೆದ ತಿಂಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ 69.65 ಕೋಟಿ ಮೌಲ್ಯದ 32 ಸ್ಥಿರ ಮತ್ತು ಚರ ಆಸ್ತಿಗಳನ್ನು ಪಿಎಂಎಲ್ಎಯ ನಿಬಂಧನೆಗಳ ಅಡಿಯಲ್ಲಿ ಜಪ್ತಿ ಮಾಡಿದೆ. ಭೂಷಣ್ ಅನಂತ್ ಪಾಟೀಲ್, ರಾಜೇಶ್ ಶೆಟ್ಟಿ, ಸಾರಿಕಾ ಶೆಟ್ಟಿ, ಕೃತಿ ವರ್ಮಾ ಮತ್ತು ಇತರರ ಹೆಸರಿನಲ್ಲಿ ಇರುವ ಜಮೀನು, ಫ್ಲ್ಯಾಟ್ಗಳು, ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಕೃತಿ ವರ್ಮಾ ಪಾತ್ರವೇನು?
ಕೃತಿ 2021ರಲ್ಲಿ ಅಕ್ರಮ ಆದಾಯದಿಂದ ಬಂದಿದ್ದ ಹಣದಲ್ಲಿ ಹರಿಯಾಣದ ಗುರುಗ್ರಾಮದಲ್ಲಿ ಖರೀದಿಸಿದ್ದ ಆಸ್ತಿ ಒಂದನ್ನು ಮಾರಾಟ ಮಾಡಿದ್ದಳು. ಭಾರಿ ಮೊತ್ತದ ಹಣ ಆಕೆಯ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಇದನ್ನು ಗಮನಿಸಿದ ಇಡಿ ಅಧಿಕಾರಿಗಳು ತಕ್ಷಣ ದಾಳಿ ನಡೆಸಿದ್ದರು. ಇಡೀ ಮಾರಾಟ ಪ್ರಕ್ರಿಕೆಯನ್ನು ಪರಿಶೀಲನೆ ನಡೆಸಿದಾಗ 1.18 ಕೋಟಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತು ಮತ್ತು ತಕ್ಷಣವೇ ಆಕೆಯ ಖಾತೆಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡರು.
ವಂಚನೆಯಲ್ಲಿ ಬಂದ ಹಣದಿಂದಮ ಲೋನಾವಾಲ, ಖಾಂದಾಲ, ಕರ್ಜಾತ್, ಪುಣೆ ಮತ್ತು ಉಡುಪಿ ಏರಿಯಾಗಳಲ್ಲಿ ಜಮೀನು ಖರೀದಿ ಮಾಡಲು ಆರೋಪಿಗಳು ಬಳಸಿದ್ದಾರೆ. ಅಲ್ಲದೆ, ಮುಂಬೈ ಮತ್ತು ಪನ್ವೇಲ್ ಏರಿಯಾಗಳಲ್ಲಿ ಫ್ಲ್ಯಾಟ್ ಖರೀದಿ ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಲು ಇತರೆ ಆರೋಪಿಗಳು ಹಣವನ್ನು ಬಳಸಿರುವುದು ಇಡಿ ತನಿಖೆಯಿಂದ ಬಯಲಾಗಿದೆ. ಸದ್ಯ ಇದರ ವಿಚಾರಣೆ ಮುಂದುವರಿದಿದೆ.
ಯಾರು ಈ ಕೃತಿ ವರ್ಮಾ?
ಕೃತಿ 2016 ರಲ್ಲಿ ಭಾರತೀಯ ಕಸ್ಟಮ್ ಮತ್ತು ನೇರ ತೆರಿಗೆಯಲ್ಲಿ ಜಿಎಸ್ಟಿ ಅಧಿಕಾರಿಯಾದರು. 2018 ರಲ್ಲಿ ಅವರು MTV ಶೋ ರೋಡೀಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಅಲ್ಲದೆ, ಅದೇ ವರ್ಷ ಬಿಗ್ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಟ್ಟರು. ಇದು ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿದೆ. (ಏಜೆನ್ಸೀಸ್)
ಮೊದಲ ರಾತ್ರಿಯ ಖಾಸಗಿ ವಿಡಿಯೋ ಹಂಚಿಕೊಂಡ ದಂಪತಿ! ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಕಬ್ಜ ಚಿತ್ರದಲ್ಲಿ ತಾನ್ಯಾ; ಉಪೇಂದ್ರ ಜತೆ ವಿಶೇಷ ಹಾಡಿನಲ್ಲಿ ಮಿಂಚಲಿರುವ ನಟಿ
ಚಲಿಸುತ್ತಿದ್ದ ಬೈಕ್ ಮೇಲೆ ಮಧ್ಯರಾತ್ರಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್! ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವಕ