ಮಧ್ಯಪ್ರದೇಶ: ಸುದೀಪ್ತೋ ಸೇನ್ ನಿರ್ದೇಶನದ ಮತ್ತು ನಟಿ ಅದಾ ಶರ್ಮಾ ಅಭಿನಯದ ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ ಇತ್ತೀಚೆಗೆ ದೇಶಾದ್ಯಂತ ತೆರೆಕಂಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಸ್ತುತ ಈ ಚಿತ್ರದ ವಾಸ್ತವಿಕ ನಿಖರತೆಯ ಬಗ್ಗೆ ಸಾಕಷ್ಟು ಚರ್ಚೆಗಳು ಪ್ರಾರಂಭವಾಗಿವೆ.
ಹೀಗಿರುವಾಗಲೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ‘ದಿ ಕೇರಳ ಸ್ಟೋರಿ’ಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ. ಈ ಚಿತ್ರ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಒತ್ತಾಯಿಸಿದ ಬೆನ್ನಲ್ಲೇ ಚೌಹಾಣ್ ಅವರು ಈ ಕುರಿತು ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕುದುರೆ ಸವಾರಿ ಮಾಡುವಾಗ ಬಿದ್ದು, ಮಿಸ್ ಯೂನಿವರ್ಸ್ ಫೈನಲಿಸ್ಟ್ ಸಾವು!
ಜೊತೆಗೆ ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಗಳು ಮತ್ತು ಅದರ ಭೀಕರ ಮುಖವನ್ನು ಬಹಿರಂಗಪಡಿಸುವ ಹಾಗೂ ಅದರ ಕುರಿತು ಜಾಗರೂಕತೆಯನ್ನು ಮೂಡಿಸುವ ಈ ಚಿತ್ರವನ್ನು ವೀಕ್ಷಿಸುವಂತೆ ಹೇಳಿದ್ದಾರೆ.
ಅಲ್ಲದೇ “ನಾವು ಈಗಾಗಲೇ ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಮಾಡಿದ್ದೇವೆ. ಈ ಚಿತ್ರವು ಜಾಗೃತಿ ಮೂಡಿಸುವುದರಿಂದ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು. ಪೋಷಕರು, ಮಕ್ಕಳು ಮತ್ತು ಹೆಣ್ಣುಮಕ್ಕಳು ಇದನ್ನು ನೋಡಬೇಕು. ಅದಕ್ಕಾಗಿಯೇ ಮಧ್ಯಪ್ರದೇಶ ಸರ್ಕಾರವು ಚಲನಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡುತ್ತಿದೆ” ಎಂದು ಚೌಹಾಣ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ನಿನ್ನೆ ಬಳ್ಳಾರಿಯಲ್ಲಿ ತಮ್ಮ ಭಾಷಣದ ಮಧ್ಯೆ ಚಿತ್ರದ ಕುರಿತು ಉಲ್ಲೇಖಿಸಿದ್ದರು. ಈ ಹಿಂದೆ ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ತೆರಿಗೆ ವಿನಾಯಿತಿಯನ್ನು ಪಡೆದಿತ್ತು.(ಏಜೆನ್ಸೀಸ್)