ಬೆಂಗಳೂರು: ಚಂಡಮಾರುತ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ.
ಶನಿವಾರ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಕೋಲಾರ ಜಿಲ್ಲೆಯ ಘಟ್ಟಕಾಮದೇನಹಳ್ಳಿ, ಮೋತಕಪಲ್ಲಿ ಹಾಗೂ ಬೀದರ್ ಜಿಲ್ಲೆಯ ಚಾಂಗ್ಲರ್ನಲ್ಲಿ ಬಿರುಸಾಗಿ ವರ್ಷಧಾರೆಯಾದರೆ, ಮಲೆನಾಡು ಭಾಗದ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣವಾಗಿ ಸುರಿದಿದೆ.
ಯೆಲ್ಲೋ ಅಲರ್ಟ್ ಘೋಷಣೆ
ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಮೇ 9ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮೇ 7ರಿಂದ ಮೇ 10ರವರೆಗೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಸುರಿಯಲಿದೆ.
ಮೇ 9ರಂದು ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ರೂಪುಗೊಳ್ಳುವ ಚಂಡಮಾರುತ ಮಾರುತಗಳು ನಂತರ, ಬಂಗಾಳಕೊಲ್ಲಿಯ ಮಧ್ಯ ಭಾಗದತ್ತ ಚಲಿಸಲಿವೆ. ಇದರಿಂದ ಅಂಡಮಾನ್ ಮತ್ತು ನಿಕೋಬಾರ್, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶದಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ; ಮೇ 9,10ರಂದು ಸಾರಿಗೆ ಸೇವೆಯಲ್ಲಿ ವ್ಯತ್ಯಯ
ಈಗಾಗಲೇ ಸಮುದ್ರ ಮಟ್ಟದಲ್ಲಿ ಗಾಳಿ ವೇಗ ಹೆಚ್ಚಾಗುತ್ತಿದ್ದು, ಮೀನುಗಾರರು ಸಮುದ್ರದಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ಕೊಟ್ಟಿದೆ.
ಮೂರು ಗಂಟೆಗೊಮ್ಮೆ ಮಾಹಿತಿ
ವಿಧಾನಸಭಾ ಚುನಾವಣೆ ನಿಮಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಕೈಗೊಳ್ಳುವ ರೋಡ್ ಶೋಗೆ ಯಾವುದೇ ತೊಂದರೆಯಾಗದಂತೆ ಐಎಂಡಿ ಮೂರು ಗಂಟೆಗೊಮ್ಮೆ ಹವಾಮಾನದ ಕುರಿತು ಮಾಹಿತಿ ನೀಡುತ್ತಿದೆ.
ಮೋದಿಯವರ ವಿಶೇಷ ರಕ್ಷಣಾ ಗುಂಪು(ಎಸ್ಪಿಜಿ) ತಂಡ, ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೂ ಐಎಂಡಿ ಮಾಹಿತಿ ಒದಗಿಸುತ್ತಿದೆ. ಪ್ರತಿ ನಿತ್ಯ ಹವಾಮಾನ ಕುರಿತು ಆಗುಹೋಗುವ ಕುರಿತು ನೂರಾರು ಸಾರ್ವಜನಿಕರು ಕರೆ ಮಾಡುತ್ತಾರೆ.
ಇದನ್ನು ತಪ್ಪಿಸಲು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಗ್ರೂಪ್ಗಳನ್ನು ಸೃಷ್ಟಿಸಿ ಇದರ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.