ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಇನ್ನು ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಕಣಕ್ಕಿಳಿದಿದ್ದು ಬಿಜೆಪಿಯಿಂದ ಮಣಿಕಂಠ ರಾಥೋಡ್ ಎಂಬುವವರಿಗೆ ಟಿಕೆಟ್ ಕೊಡಲಾಗಿದೆ.
ಇನ್ನು ಮಣಿಕಂಠ ರಾಥೋಡ್ ಖರ್ಗೆ ಕುಟುಂಬದ ಕುರಿತು ಮಾತನಾಡಿದ್ದಾನೆ ಎನ್ನಲಾದ ಆಡಿಯೋ ರಾಜ್ಯ ರಾಜಕಾರಣದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದು ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.
ಈ ಷಡ್ಯಂತ್ರಗಳೆಲ್ಲಾ ಯಾರದ್ದು
40% ಕಮಿಷನ್ನಿನ ಬಿಜೆಪಿ 40 ಕ್ರಿಮಿನಲ್ ಪ್ರಕರಣ ಇರುವ ಮಣಿಕಂಠ ರಾಥೋಡನಿಗೆ ಟಿಕೆಟ್ ನೀಡಿದ್ದೇ ಖರ್ಗೆ ಕುಟುಂಬವನ್ನು ಮುಗಿಸುವುದಕ್ಕಾ ಎಂದು ಪ್ರಶ್ನಿಸಿದೆ.
ದಲಿತ ನಾಯಕ ಪರಮೇಶ್ವರ್ ಮೇಲಿನ ದಾಳಿ, ದಲಿತ ನಾಯಕ ಖರ್ಗೆಯವರ ಕುಟುಂಬ ಕೊಲ್ಲಲು ಸಂಚು ಈ ಷಡ್ಯಂತ್ರಗಳೆಲ್ಲಾ ಯಾರದ್ದು ನಾಗಪುರದ್ದೋ, ಅಮಿತ್ ಶಾರದ್ದೋ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಈ ಪರಿ ದ್ವೇಷವೇ
ದಲಿತ ಸಮುದಾಯದ ಉನ್ನತ ನಾಯಕ, ದೇಶದ ಹಿರಿಯ ಹಾಗೂ ಮುತ್ಸದ್ದಿ ನಾಯಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಇಡೀ ಕುಟುಂಬವನ್ನು ಹತ್ಯೆ ಮಾಡುವ ಬಿಜೆಪಿಯ ಸಂಚು ಮಣಿಕಂಠ ರಾಥೋಡನ ಬಾಯಲ್ಲಿ ಹೊರಬಂದಿದೆ.
ಖರ್ಗೆ ಕುಟುಂಬದ ಹತ್ಯೆಗೆ ನೀಡಿದ ಸುಪಾರಿಗಾಗಿಯೇ ರೌಡಿ ಶೀಟರ್ಗೆ ಟಿಕೆಟ್ ನೀಲಾಗಿದೆಯೇ ನರೇಂದ್ರ ಮೋದಿ ಅವರೇ. ಪ್ರಶ್ನಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಈ ಪರಿ ದ್ವೇಷವೇ ಮೋದಿಯವರೇ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ ಮೂಲಕ ಶಕ್ತಿ ತುಂಬಿದ್ದಾರೆ: ಆಶ್ವತ್ಥನಾರಾಯಣ
ಸುಪಾರಿ ಕೊಟ್ಟವರು ಯಾರು
ದಲಿತ ನಾಯಕರೊಬ್ಬರು ನನ್ನನ್ನು ಈ ಪರಿ ಕಾಡುತ್ತಾರೆ ಎಂಬ ಇಗೋ ಹರ್ಟ್ ಆಗಿದೆಯೇ. ದೇಶದ ಪ್ರಮುಖ ನಾಯಕರು, ದಲಿತ ಸಮುದಾಯಗಳ ಸಾಕ್ಷಿಪ್ರಜ್ಞೆ, ವಿರೋಧ ಪಕ್ಷದ ನಾಯಕರಾದ ಖರ್ಗೆ ಅವರ ಹತ್ಯೆಗೆ ಸುಪಾರಿ ಕೊಟ್ಟವರಾರು ಎಂದು ಪ್ರಶ್ನಿಸಿದೆ.
ತಮ್ಮದೇ ಪಕ್ಷದ ಅಭ್ಯರ್ಥಿಯ ಸಂಚು ಬಯಲಾದರೂ ಪ್ರಧಾನಿ ಏಕೆ ಮಾತಾಡುತ್ತಿಲ್ಲ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.
ಟಿಕೆಟ್ ನೀಡಿದ್ದು ಇದಕ್ಕೇನಾ
ದೆಹಲಿಯಲ್ಲಿ ಖರ್ಗೆ ಮೋದಿ ಸರ್ಕಾರಕ್ಕೆ ದುಃಸ್ವಪ್ನದಂತೆ ಕಾಡುತ್ತಿದ್ದರೆ, ಕರ್ನಾಟಕದಲ್ಲಿ ಪ್ರಿಯಾಂಕ ಖರ್ಗೆ ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಎಡೆಬಿಡದೆ ಕಾಡಿದ್ದಾರೆ. ಹಲವು ಹಗರಣಗಳನ್ನು ಪ್ರಶ್ನಿಸಿದ್ದಾರೆ.
ಈ ಕಾರಣಕ್ಕೆ ಇಡೀ ಖರ್ಗೆ ಕುಟುಂಬವನ್ನು ಮುಗಿಸುವ ಸಂಚೇ ಕ್ರಿಮಿನಲ್ಗೆ ಟಿಕೆಟ್ ನೀಡಿದ್ದು ಇದಕ್ಕೇನಾ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.