ತಮಿಳು ನಟ ಸಂತಾನಂ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಪ್ರಶಾಂತ್ ರಾಜ್ ಮೊದಲೇ ಹೇಳಿದ್ದರು. ಯಾವ ಪ್ರಶಾಂತ್ ಎಂಬ ಪ್ರಶ್ನೆ ಬರಬಹುದು. ಅದೇ ‘ಲವ್ ಗುರು’, ‘ಜೂಮ್, ‘ಆರೆಂಜ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರಲ್ಲ, ಅದೇ ಪ್ರಶಾಂತ್ ಈಗ ಸಂತಾನಂ ಅಭಿನಯದಲ್ಲಿ ದ್ವಿಭಾಷಾ ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಸದ್ದಿಲ್ಲದೆ ಮುಗಿದಿದೆ.
ಈ ಚಿತ್ರದ ವಿಶೇಷತೆಯೆಂದರೆ, ಕನ್ನಡದ ಹಲವು ತಂತ್ರಜ್ಞರು ಕೆಲಸ ಮಾಡುತ್ತಿರುವುದು. ‘ರಾಬರ್ಟ್’ ಖ್ಯಾತಿಯ ಸುಧಾಕರ್ ರಾಜ್ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು, ಸಂತಾನಂಗೆ ನಾಯಕಿಯರಾಗಿ ತಾನ್ಯಾ ಹೋಪ್ ಮತ್ತು ರಾಗಿಣಿ ನಟಿಸಲಿದ್ದಾರೆ. ಅಂದಹಾಗೆ, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಮುಹೂರ್ತವಾಗಿ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಪ್ರಶಾಂತ್ರ ಹಿಂದಿನ ಸಿನಿಮಾಗಳಂತೆ ಇದು ಸಹ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಸಾಕಷ್ಟು ಮಜವಾದ ಅಂಶಗಳಿವೆಯಂತೆ.
ಈ ಚಿತ್ರವನ್ನು ಅವರ ಸಹೋದರ ನವೀನ್ ರಾಜ್, ಫಾರ್ಚುನ್ ಫಿಲಂಸ್ ಬ್ಯಾನರ್ನಡಿ ನಿರ್ವಿುಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಆ ನಂತರ ಚೆನ್ನೈನಲ್ಲಿ ಮುಂದುವರೆಯಲಿದೆ. ವಿದೇಶದಲ್ಲೂ ಹಾಡು ಹಾಗೂ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುವುದಂತೆ.