ಚೆನ್ನೈ: ಶಂಕಿತ ಆರೋಪಿಗಳ ಹಲ್ಲುಗಳನ್ನು ಕಿತ್ತು, ವೃಷಣಗಳನ್ನು ಜಜ್ಜಿ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ತಮಿಳುನಾಡು ಐಪಿಎಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಈ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಐಪಿಎಸ್ ಅಧಿಕಾರಿ ಬಲ್ವೀರ್ ಸಿಂಗ್ರನ್ನು ಅಮಾನತು ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದರು.
ಆತನ ಅಮಾನತಿಗೆ ಆದೇಶಿಸಿದ್ದೇನೆ. ಮ್ಯಾಜಿಸ್ಟ್ರಿಯಲ್ ವಿಚಾರಣಾ ವರದಿ ಬಂದ ಬಳಿಕ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಪೊಲೀಸ್ ಠಾಣೆಗಳಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ವಿಧಾನಸಭೆಯಲ್ಲಿ ಸ್ಟಾಲಿನ್ ಹೇಳಿದರು.
ಸುಮಾರು 10 ದಿನಗಳ ಹಿಂದೆ ತಿರುನೆಲ್ವೇಲಿ ಜಿಲ್ಲೆಯ ಅಂಬಾಸಮುದ್ರದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿರುವ 2020ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಬಲ್ವೀರ್ ಸಿಂಗ್ ಅವರು ಕಟಿಂಗ್ ಪ್ಲೇಯರ್ ಮೂಲಕ ಐವರು ಶಂಕಿತ ಆರೋಪಿಗಳ ಹಲ್ಲನ್ನು ಕಿತ್ತಿರುವ ಆರೋಪ ಹೊತ್ತಿದ್ದಾರೆ. ಇಷ್ಟೇ ಅಲ್ಲದೆ, ನವಿವಾಹಿತನೊಬ್ಬನ ವೃಷಣಗಳನ್ನು ಜಜ್ಜಿರುವ ಆಪಾದನೆ ಅವರ ಮೇಲಿದೆ. ಸಂತ್ರಸ್ತ ನವವಿವಾಹಿತನ ಸ್ಥಿತಿ ಇದೀಗ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹಲ್ಲೆ ಪ್ರಕರಣದ ಶಂಕಿತ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ಅಧಿಕಾರಿಯ ಕಸ್ಟಡಿಯ ಚಿತ್ರಹಿಂಸೆ ಬಗ್ಗೆ ದೂರಿದ್ದಾರೆ.
ಈ ಸಂಬಂಧ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿ ಅವರು ಬಲ್ವೀರ್ ಸಿಂಗ್ ವಿರುದ್ಧ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ, ಇದು ಸಾಲದು ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಪ್ರತಿಪಾದಿಸಿದ್ದು, ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಪಟ್ಟುಹಿಡಿದಿದ್ದಾರೆ. (ಏಜೆನ್ಸೀಸ್)
ನನ್ನನ್ನು ಹೊಡೆದು ಹಾಕುವುದಾಗಿ ಪೊಲೀಸ್ ಅಧಿಕಾರಿ ಬೆದರಿಸಿದ್ದಾರೆ: ಅತೀಕ್ ಅಹ್ಮದ್ ಸಹೋದರ ಅಶ್ರಫ್ ಆರೋಪ
ಚಾರ್ಲ್ಸ್ ಡಿಕನ್ಸ್ ಕಥೆಗೆ ದೃಶ್ಯರೂಪ; ‘ಸಿಗ್ನಲ್ ಮ್ಯಾನ್ 1971’ ಸದ್ಯದಲ್ಲೇ ತೆರೆಗೆ