ಜೈಪುರ: ಆರಂಭಿಕ ಎನ್ ಜಗದೀಶನ್ (102 ರನ್, 101 ಎಸೆತ, 9 ಬೌಂಡರಿ, 1 ಸಿಕ್ಸರ್) ಶತಕ ಮತ್ತು ಶಾರುಖ್ ಖಾನ್ (79*ರನ್, 39 ಎಸೆತ, 7 ಬೌಂಡರಿ, 6 ಸಿಕ್ಸರ್) ಸ್ಫೋಟಕ ಅರ್ಧಶತಕಕ್ಕೆ ಬೆದರಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ತಮಿಳುನಾಡು ತಂಡಕ್ಕೆ 151 ರನ್ಗಳಿಂದ ಶರಣಾಗಿದೆ. ಲೀಗ್ ಹಂತದಲ್ಲೂ ತಮಿಳುನಾಡಿಗೆ ಮಣಿದಿದ್ದ ಮನೀಷ್ ಪಾಂಡೆ ಬಳಗ, ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಸತತ 3ನೇ ಸೋಲು ಕಂಡಿತು. ಈ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಫೈನಲ್ನಲ್ಲೂ ತಮಿಳುನಾಡಿಗೆ ಮಣಿದಿತ್ತು. ಆಗ ಶಾರುಖ್ ಖಾನ್ ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮಿಳುನಾಡು ತಂಡವನ್ನು ಗೆಲ್ಲಿಸಿದ್ದರು.
ಟಾಸ್ ಗೆದ್ದು ತಮಿಳುನಾಡಿಗೆ ಬ್ಯಾಟಿಂಗ್ ಬಿಟ್ಟುಕೊಡುವ ಮೂಲಕ ಕರ್ನಾಟಕ ತಂಡ ಆರಂಭದಲ್ಲೇ ದೊಡ್ಡ ಎಡವಟ್ಟು ಮಾಡಿಕೊಂಡಿತು. ಎಚ್ಚರಿಕೆಯ ಆರಂಭ ಕಂಡ ತಮಿಳುನಾಡು ಬಳಿಕ ರನ್ಪ್ರವಾಹ ಹರಿಸಿ 8 ವಿಕೆಟ್ಗೆ 354 ರನ್ಗಳ ಬೃಹತ್ ಮೊತ್ತ ಪೇರಿಸಿತು. ಸ್ಲಾಗ್ ಓವರ್ಗಳಲ್ಲಿ ಶಾರುಖ್ ಖಾನ್ ಆರ್ಭಟದಿಂದ ತ.ನಾಡು ಕೊನೇ 4 ಓವರ್ಗಳಲ್ಲಿ 64 ರನ್ ದೋಚಿತು. ಪ್ರತಿಯಾಗಿ ಪ್ರಮುಖ ಬ್ಯಾಟರ್ಗಳ ವೈಫಲ್ಯದಿಂದ ಕರ್ನಾಟಕ ತಂಡ 39 ಓವರ್ಗಳಲ್ಲಿ 203 ರನ್ಗೆ ಸರ್ವಪತನ ಕಂಡು ಸೋಲುಂಡಿತು. ದಿನದ ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ಹಿಮಾಚಲ ಪ್ರದೇಶ ತಂಡ ಉತ್ತರ ಪ್ರದೇಶ ವಿರುದ್ಧ 5 ವಿಕೆಟ್ಗಳಿಂದ ಜಯಿಸಿತು.
ಸಮರ್ಥ್, ಗೌತಮ್ ಅಲಭ್ಯ
ಕ್ವಾರ್ಟರ್ಫೈನಲ್ಗೆ ಮುನ್ನ ಕರ್ನಾಟಕ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿತ್ತು. ಭರ್ಜರಿ ಾರ್ಮ್ನಲ್ಲಿರುವ ಬ್ಯಾಟರ್ ಆರ್. ಸಮರ್ಥ್ ಮತ್ತು ಆಲ್ರೌಂಡರ್ ಕೆ. ಗೌತಮ್ ಗಾಯದಿಂದಾಗಿ ರಾಜ್ಯ ತಂಡಕ್ಕೆ ಅಲಭ್ಯರಾಗಿದ್ದರು. ಜತೆಗೆ ಎಂ. ವೆಂಕಟೇಶ್ರನ್ನು ಕೈಬಿಟ್ಟ ಕರ್ನಾಟಕ, ರೋಹನ್ ಕದಂ, ಕೆಸಿ ಕಾರ್ಯಪ್ಪ ಮತ್ತು ಪ್ರತೀಕ್ ಜೈನ್ರನ್ನು ಕಣಕ್ಕಿಳಿಸಿತ್ತು.
ತಮಿಳುನಾಡು: 8 ವಿಕೆಟ್ಗೆ 354 (ಎನ್ ಜಗದೀಶನ್ 102, ಸಾಯಿ ಕಿಶೋರ್ 61, ದಿನೇಶ್ ಕಾರ್ತಿಕ್ 44, ಇಂದ್ರಜಿತ್ 31, ವಿಜಯ್ ಶಂಕರ್ 3, ಶಾರುಖ್ ಖಾನ್ 79*, ಪ್ರವೀಣ್ ದುಬೆ 67ಕ್ಕೆ 3, ಪ್ರಸಿದ್ಧಕೃಷ್ಣ 57ಕ್ಕೆ 2); ಕರ್ನಾಟಕ: 39 ಓವರ್ಗಳಲ್ಲಿ 203 (ಪಡಿಕಲ್ 0, ರೋಹನ್ ಕದಂ 24, ಮನೀಷ್ 9, ಕೆವಿ ಸಿದ್ಧಾರ್ಥ್ 29, ಮನೋಹರ್ 34, ಶರತ್ 43, ಪ್ರವೀಣ್ ದುಬೆ 26, ರಘುಪತಿ 36ಕ್ಕೆ 4, ವಾಷಿಂಗ್ಟನ್ ಸುಂದರ್ 43ಕ್ಕೆ 3, ಸಾಯಿ ಕಿಶೋರ್ 32ಕ್ಕೆ 1).
ಬುಧವಾರದ ಕ್ವಾರ್ಟರ್ಫೈನಲ್ಸ್
*ವಿದರ್ಭ-ಸೌರಾಷ್ಟ್ರ
*ಕೇರಳ-ಸರ್ವೀಸಸ್
ಆರಂಭ: ಬೆಳಗ್ಗೆ 9.00
ಪ್ರೊ ಕಬಡ್ಡಿ ಲೀಗ್ನಲ್ಲಿ ಕನ್ನಡಿಗರ ಕಲರವ ; ರಾಜ್ಯದ ಡಜನ್ಗೂ ಹೆಚ್ಚು ಆಟಗಾರರು ಕಣಕ್ಕೆ