ಚೆನ್ನೈ: ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಗಳು ಪರೀಕ್ಷೆ ಮಾಡಿಸಿಕೊಂಡರೆ ಸೋಂಕು ಇರುವುದು ತಿಳಿಯುವುದು ಮಾಮೂಲು. ಆದರೆ ಎಷ್ಟೋ ಮಂದಿಯಲ್ಲಿ ಸೋಂಕಿನ ಲಕ್ಷಣಗಳೇ ಇರುವುದಿಲ್ಲ. ಆರೋಗ್ಯದಿಂದ ಇದ್ದಂತೆ ಕಂಡರೂ, ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲದಿದ್ದರೂ ಅಂಥವರಿಗೂ ಕರೊನಾ ಪಾಸಿಟಿವ್ ರಿಪೋರ್ಟ್ ಬರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಅಂಥದ್ದೇ ಒಂದು ವಿಚಿತ್ರ ಪ್ರಕರಣ ನಡೆದಿರುವುದು ತಮಿಳುನಾಡಿನ ವಿಲ್ಲುಪುರದಲ್ಲಿ. ಇಲ್ಲಿಯ 26 ವರ್ಷದ ಯುವತಿಯ ವಿವಾಹವು ತಿರುಪುರದ ಯುವಕನೊಂದಿಗೆ ಐದಾರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಕಳೆದ ಭಾನುವಾರ ಮದುವೆಗೆ ಮುಹೂರ್ತ ಫಿಕ್ಸ್ ಆಗಿತ್ತು.
ಇದನ್ನೂ ಓದಿ: ಕಳ್ಳರಿಗೆ ಕರೊನಾ ಸೋಂಕು: ನ್ಯಾಯಾಧೀಶರು, ನಟ ಹಾಗೂ ಶಾಸಕ ಕ್ವಾರಂಟೈನ್ಗೆ!
ಅದಾಗಲೇ ಲಾಕ್ಡೌನ್ ಘೋಷಣೆಯಾಯಿತು. ಆದರೆ ಮದುವೆಯನ್ನು ಲಾಕ್ಡೌನ್ ನಿಯಮದ ಅನ್ವಯವೇ ಮಾಡಲು ತಯಾರಿ ನಡೆಸಿದ ಎರಡೂ ಕುಟುಂಬದವರು, ಮದುವೆಯನ್ನು ಮುಂದಕ್ಕೆ ಹಾಕುವುದು ಬೇಡ ಎಂಬ ನಿರ್ಧಾರಕ್ಕೆ ಬಂದರು. ಅದರಂತೆ, ವಧುವಿನ ಮನೆಯವರು 300 ಕಿ.ಮೀ ದೂರದಲ್ಲಿ ಇರುವ ವರನ ಮನೆಗೆ ಮದುವೆಗೆ ಎರಡು ದಿನ ಮುಂಚಿತವಾಗಿ ಬಂದರು.
ಮದುಮಗಳಿಗೆ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಯೂ ಇರಲಿಲ್ಲ. ಆರಾಮಾಗಿಯೇ ಇದ್ದಳು. ತನ್ನ ಮದುವೆಯ ಕನಸು ಕಾಣುತ್ತಿದ್ದಳು. ಆದರೆ ಆರೋಗ್ಯ ಅಧಿಕಾರಿಗಳು ನಿಯಮಾನುಸಾರ ವಧು ಹಾಗೂ ಆಕೆಯ ಮನೆಯವರನ್ನು ಪರೀಕ್ಷೆಗೆ ಒಳಪಡಿಸಿದರು. ಅವರೆಲ್ಲಾ 300 ಕಿ.ಮೀ ದೂರದ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ನಿಯಮದ ಅನುಸಾರ ಪರೀಕ್ಷೆ ಕಡ್ಡಾಯವಾಗಿತ್ತು.
ಇದನ್ನೂ ಓದಿ: ಆಹಾ ತಿರುಪತಿ ಲಡ್ಡು- ಮೂರೇ ಗಂಟೆಯಲ್ಲಿ ಹೊಡೆಯಿತು ಲಕ್ಷ ಲಕ್ಷ ಬಂಪರ್!
ಆದರೆ, ವರದಿ ಬಂದಾಗ ವಧುವಿನ ಮನೆಯವರು ಬೆಚ್ಚಿಬಿದ್ದರು. ಕಾರಣ, ಆಕೆಗೆ ಕರೊನಾ ಪಾಸಿಟಿವ್ ಬಂದಿತ್ತು! ಏನೊಂದು ಲಕ್ಷಣಗಳೇ ಇಲ್ಲದಿದ್ದರೂ ವೈರಸ್ ಆಕೆಯ ದೇಹ ಹೊಕ್ಕಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಮದುವೆಯನ್ನು ರದ್ದು ಮಾಡಬೇಕಾಗುತ್ತದೆ ಎಂದೇ ಅವರು ಅಂದುಕೊಂಡರು.
ಈ ಬಗ್ಗೆ ವರನ ಮನೆಯವರಿಗೂ ವಿಷಯ ತಿಳಿಸಲಾಯಿತು. ಆದರೆ ಯಾವುದೇ ಸೋಂಕಿನ ಲಕ್ಷಣ ಇಲ್ಲದ ಹಿನ್ನೆಲೆಯಲ್ಲಿ ನಿಗದಿತ ಮುಹೂರ್ತದಲ್ಲಿಯೇ ಮದುವೆ ಮಾಡಿಬಿಡೋಣ ಎಂದರು ವರನ ಕಡೆಯವರು. ನಂತರ ಮದುವೆ ನಡೆಸಲು ಅನುಮತಿ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಆರೋಗ್ಯ ಅಧಿಕಾರಿಗಳು ಆದಾಯ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಯಾವುದೇ ಲಕ್ಷಣಗಳು ಇಲ್ಲದ ಕಾರಣ, ಕೆಲ ಷರತ್ತುಗಳೊಂದಿಗೆ ವಿವಾಹ ಸಮಾರಂಭಕ್ಕೆ ಅನುಮತಿ ನೀಡಿದರು.
ಮದುವೆ ನಡೆಯಿತು. ಆರೋಗ್ಯ ಅಧಿಕಾರಿಗಳ ಸೂಚನೆ ಮೇರೆಗೆ ನೂತನ ದಂಪತಿ ಸೇರಿದಂತೆ ಮದುವಯೆಲ್ಲಿ ಹಾಜರಿದ್ದ 28 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಸೇಲಂ ಕಲೆಕ್ಟರ್ ಎಸ್.ಎ.ರಾಮನ್ ತಿಳಿಸಿದ್ದಾರೆ. ಮಾನವೀಯ ಆಧಾರದ ಮೇಲೆ ಮದುವೆಗೆ ಅನುಮತಿ ನೀಡಿದ್ದೆವು, ನಂತರ ಎರಡೂ ಕುಟುಂಬಗಳಿಗೆ ಮಾರ್ಗಸೂಚಿ ಅನುಸರಿಸುವಂತೆ ಆದೇಶಿಸಲಾಗಿದೆ ಎಂದರು.