More

    ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಪ್ರಗತಿ ಸಾಧ್ಯ; ನಿರಂಜನಾನಂದಪುರಿ ಶ್ರೀ

    ರಾಣೆಬೆನ್ನೂರ: ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಬಲರಾದಲ್ಲಿ ಯಾವುದೇ ಸಮುದಾಯ ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
    ನಗರದ ಹಲಗೇರಿ ರಸ್ತೆ ಶ್ರೀ ಬೀರಲಿಂಗೇಶ್ವರ (ಹೊರಗುಡಿ) ದೇವಸ್ಥಾನದ ಆವರಣದಲ್ಲಿ ಶುಕ್ರವಾರ ತಾಲೂಕು ಕುರುಬ ನೌಕರರ ಸಂಘ, ಪ್ರದೇಶ ಕುರುಬರ ಸಂಘದ ತಾಲೂಕು ಘಟಕ, ಕುರುಬ ಸಮಾಜದ ವಿವಿಧ ಸಂಘಗಳ ವತಿಯಿಂದ ಏರ್ಪಡಿಸಿದ್ದ ಕುರುಬ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಶೋಷಿತ ಸಮಾಜಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪಾಲಕರು ಅನ್ಯ ವಿಷಯಗಳತ್ತ ಪ್ರಾಧಾನ್ಯತೆ ನೀಡದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು. ಬೇರೆಯವರ ಮಕ್ಕಳ ಜತೆ ತುಲನೆ ಮಾಡಿ ತಮ್ಮ ಮಕ್ಕಳಲ್ಲಿ ಕೀಳರಿಮೆ ಉಂಟು ಮಾಡದೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು.
    ನಾವು ಮಕ್ಕಳಿಗೆ ಎಷ್ಟರ ಮಟ್ಟಿಗೆ ಶಿಕ್ಷಣ ನೀಡುತ್ತಿದ್ದೇವೆ ಎನ್ನುವ ಕುರಿತು ಸಮಾಜದ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪೋಷಕರು ಮಾರುಕಟ್ಟೆಗೆ ತೆರಳಿದಾಗ ಮಕ್ಕಳಿಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಗರದಲ್ಲಿ ಸಮಾಜಕ್ಕೆ ಸೇರಿದ 45 ಎಕರೆ ಜಾಗೆಯಿದ್ದು ಅದನ್ನು ರಾಜ್ಯಕ್ಕೆ ಮಾದರಿ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.
    ಮಾಜಿ ಸಚಿವ ಆರ್. ಶಂಕರ ಸಮಾರಂಭ ಉದ್ಘಾಟಿಸಿದರು. ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಸುಭಾಸಚಂದ್ರ ಕುರುಬರ ಅಧ್ಯಕ್ಷತೆ ವಹಿಸಿದ್ದರು.
    ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶ, ನಿವೃತ್ತ ಶಿಕ್ಷಕ ಎಂ.ಎಂ. ಖನ್ನೂರ, ಡಾ. ಪ್ರವೀಣ ಖನ್ನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ. ದ್ಯಾಮಣ್ಣನವರ, ದ್ಯಾಮವ್ವ ಸತ್ತಗಿ, ಮಂಜುಳಾ ಕಿಲಾರದ, ಮಂಜುಳಾ ಕಂಬಳೇರ, ಬಸವಣ್ಣೆವ್ವ ಮಾಳಗಿ, ರೇಖಾ ಪುಟ್ಟಕ್ಕನವರ, ರತ್ನವ್ವ ಪೂಜಾರ, ಕುಬೇರ ಕೊಂಡಜ್ಜಿ, ಜೆ.ಬಿ. ಮಾಳಗುಡ್ಡಪ್ಪನವರ, ರೇಣುಕಾ ಕುರುಬರ, ದೀಪಾ ಕೊಟ್ಟದ, ಖಂಡೆಪ್ಪ ಪೂಜಾರ, ರಜನಿ ಕರಿಗಾರ, ಮಮತಾ ಆನ್ವೇರಿ, ಮಾಲತೇಶ ಸೊಮಣ್ಣನವರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts