ಯಳಂದೂರು : ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಸಲಹೆ ನೀಡಿದರು.
ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ನರೇಗಾ ಅಡಿಯಲ್ಲಿ ಕೆಲಸ ಮಾಡಲು ಅನೇಕ ಅವಕಾಶಗಳಿದ್ದು, ಇದನ್ನು ಬಳಸಿಕೊಳ್ಳಬೇಕು. ಕೃಷ್ಣಾಪುರ ಗ್ರಾಮದ 2ನೇ ಅಂಗನವಾಡಿ ಕೇಂದ್ರ ಅನುದಾನದ ಕೊರತೆಯಿಂದ ಇನ್ನೂ ಪೂರ್ಣಗೊಂಡಿಲ್ಲ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಜತೆ ಚರ್ಚಿಸಿ ಪ್ರಗತಿಯ ಮಾಹಿತಿಯನ್ನು ಪಡೆದುಕೊಂಡು ಇದನ್ನು ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕೃಷ್ಣಾಪುರ ಗ್ರಾಮದ ಅನೇಕರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ. ಇದನ್ನು ಕೊಡಿಸಿಕೊಡಿ ಎಂದು ಮಹಿಳೆಯರು ಮನವಿ ಸಲ್ಲಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಂಬಳ್ಳಿ, ಕೃಷ್ಣಾಪುರ, ಉಪ್ಪಿನಮೋಳೆ, ಕೊಮಾರನಪುರ ಗ್ರಾಮಗಳಲ್ಲಿ ಹಲವರು ಕೊಟ್ಟಿಗೆ ನಿರ್ಮಿಸಿದ್ದರೂ ಇನ್ನೂ ಬಿಲ್ ಪಾವತಿಯಾಗಿಲ್ಲ ಎಂದು ಕೆಲವರು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವ ಭರವಸೆ ನೀಡಲಾಯಿತು. ಗುಂಬಳ್ಳಿ ಗ್ರಾಮದಲ್ಲಿ ಹಲವು ಕೈಪಂಪ್ಗಳು ಕೆಟ್ಟು ನಿಂತಿದ್ದು ಇದನ್ನು ರಿಪೇರಿ ಮಾಡಬೇಕು. ಈಗ ಬೇಸಿಗೆ ಬರುತ್ತಿದ್ದು ನರೇಗಾ ಯೋಜನೆಯಡಿಯಲ್ಲಿ ಪಶುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ಕೆಲ ಗ್ರಾಮಸ್ಥರು ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಇಒ ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು. ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮಲ್ಲಿರುವ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಮೀನಾ ಗೋವಿಂದ, ಉಪಾಧ್ಯಕ್ಷ ಶ್ರೀನಿವಾಸ, ಸದಸ್ಯರಾದ ನಟರಾಜು,ಮಹೇಶ್, ರಾಜಪ್ಪ, ವೆಂಕಟರಾಜು, ಪುಟ್ಟಯ್ಯ, ಕುಮಾರ್, ಚಿಕ್ಕಣ್ಣ, ಮಹೇಶ್ ಪಿಡಿಒ ಮಂಜುನಾಥ್, ಕಿಟ್ಟಿ, ಗೋವಿಂದ ಸೇರಿದಂತೆ ಇತರರು ಇದ್ದರು.