More

    ಸಾರಾಯಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಿ

    ಮುಧೋಳ: ತಾಲೂಕಿನ ಶಾಲೆ, ಕಾಲೇಜು ಆವರಣ, ರಸ್ತೆ ಹಾಗೂ ನಗರದ ಹಲವಾರು ಸ್ಥಳಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

    ನಗರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ನಗರ, ತಾಲೂಕಿನ ಶಾಲೆ-ಕಾಲೇಜುಗಳ ಹೊರಗಡೆ ವಿದ್ಯಾರ್ಥಿನಿಯರಿಗೆ ಪುಂಡರು ಕಿರುಕುಳ ನೀಡುವುದು, ಆವರಣ ಬಳಿ ತಂಬಾಕು, ಗುಟ್ಖಾ ಮಾರುವವರ ಮೇಲೆ ಹಾಗೂ ಅಕ್ರಮ ಸಾರಾಯಿ ಮಾರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಿಪಿಐ ಅಯ್ಯನಗೌಡ ಪಾಟೀಲ ಅವರಿಗೆ ಸೂಚಿಸಿದರು.
    ಶಿಥಿಲಾವಸ್ಥೆಯಲ್ಲಿರುವ ಎಲ್ಲ ಶಾಲೆ ಕೊಠಡಿಗಳ ದುರಸ್ತಿ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಅವರಿಗೆ ಸೂಚಿಸಿದಾಗ ಕ್ಷೇತ್ರದಲ್ಲಿ 101 ಶಾಲೆ ಕೊಠಡಿಗಳು ದುರಸ್ತಿಯಲ್ಲಿದ್ದು, ಅಗತ್ಯ ಕೊಠಡಿಗಳ ದುರಸ್ತಿ ಮಾಡಲಾಗುವುದು. ಜತೆಗೆ 121 ಜನರು ವರ್ಗಾವಾಗಿದ್ದು, 116 ಜನ ಶಿಕ್ಷಕರ ವರ್ಗಾವಣೆಗೆ ನಕಾರಾತ್ಮಕ ಭಾವನೆ ಸೂಚಿಸಿದ್ದರೆ ಐದು ಜನ ಮಾತ್ರ ವರ್ಗಾವಣೆ ಬಯಸಿದ್ದಾರೆ ಎಂದು ತಿಳಿಸಿದ್ದಾರೆ.
    ನಗರಸಭೆ ವ್ಯಾಪ್ತಿಯ ಎಲ್ಲ ಸಮುದಾಯ ಭವನಗಳನ್ನು ನಗರಸಭೆ ವ್ಯಾಪ್ತಿಗೆ ತೆಗೆದುಕೊಂಡು ಸ್ವಚ್ಛತೆಯಾಗಿಡಬೇಕು. ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಕುಡಿಯುವ ನೀರು ಶುದ್ಧೀಕರಣಗೊಳಿಸಿ ಪೂರೈಸಬೇಕು ಎಂದು ಪೌರಾಯುಕ್ತ ಶಿವಪ್ಪ ಅಂಬಿಗೇರಗೆ ಸೂಚಿಸಿದರು.

    ತಾಲೂಕಿನಲ್ಲಿ 71,050 ರೇಷನ್ ಕಾರ್ಡ್‌ಗಳಿದ್ದು, ಅನಧಿಕೃತ ಕಾರ್ಡ್‌ಗಳನ್ನು ರದ್ದುಗೊಳಿಸಬೇಕೆಂದು ಆಹಾರ ನಿರೀಕ್ಷಕ ಪಿ.ಡಿ. ದೇಶಪಾಂಡೆಗೆ ತಿಳಿಸಿದರು. ಸಭೆಗೆ ಬಾರದ ಪುನರ್ವಸತಿ ಕೇಂದ್ರದ ಅಧಿಕಾರಿಗೆ ನೋಟಿಸ್ ನೀಡುವಂತೆ ತಾಪಂ ಇಒಗೆ ಹೇಳಿದರು.

    ವಸತಿ ಯೋಜನೆಗಳನ್ನು ಬಡವರು, ನಿರ್ಗತಿಕರಿಗೆ ತಲುಪಿಸಬೇಕು. ಒಟ್ಟು 8 ಸ್ಲಂ ಪ್ರದೇಶದಲ್ಲಿ 2,044 ಗುಡಿಸಲುಗಳಿದ್ದು, 11,115 ಜನರು ವಾಸವಾಗಿದ್ದು, ಹಲವರಿಗೆ ಹಕ್ಕು ಪತ್ರ ವಿತರಣೆ ಆಗಿಲ್ಲ, ಕೂಡಲೇ ವಿತರಿಸಬೇಕೆಂದು ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.
    ಸರ್ಕಾರಿ ಆಸ್ಪತ್ರೆಯಲ್ಲಿ ದಂತ ವೈದ್ಯರೂ ಇಲ್ಲ. ಮಹಾಲಿಂಗಪುರದ ವೈದ್ಯರನ್ನು ಡೆಪ್ಟೇಷನ್ ಮಾಡಲಾಗಿತ್ತಾದರೂ ಅವರೂ ಕಾರಣ ಹೇಳದೆ ಆಸ್ಪತ್ರೆಗೆ ಬರುತ್ತಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಡಿಎಚ್‌ಒಗೆ ದೂರವಾಣಿಯಲ್ಲಿ ತಿಳಿಸಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಲ್ಲ ಸೌಲಭ್ಯಗಳನ್ನು ಸೂಕ್ತ ಫಲಾನುಭವಿಗಳಿಗೆ ತಲುಪಿಸಬೇಕೆಂದು ಸಿಡಿಪಿಒ ಕೆ.ಜೆ. ಕೋರೆಗೋಳ ಅವರಿಗೆ ತಿಳಿಸಿದರು.

    ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಆಯ್ಕೆಯಲ್ಲಿರುವ ಲೋಪಗಳನ್ನು ಸರಿಪಡಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ ಕೋರಡ್ಡಿ ಸಚಿವರಲ್ಲಿ ವಿನಂತಿಸಿದರು.

    ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಸಂಜಯ ಹಿಪ್ಪರಗಿ, ಟಿಎಚ್‌ಒ ಡಾ. ವೆಂಕಟೇಶ ಮಲಘಾಣ, ವೈದ್ಯಾಧಿಕಾರಿ ಡಾ. ಅಶೋಕ ಸೂರ್ಯವಂಶಿ, ತಾಪಂ ಆಡಳಿತಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts