ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಪ್ನಾ ಸುರೇಶ್ ಮತ್ತು ಗ್ಯಾಂಗ್ ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ. ಆದರೆ ಈ ಕಳ್ಳಸಾಗಣೆ ಮೂರು ಪ್ರತ್ಯೇಕ ಪ್ರಕರಣಗಳ ಮೂಲಕ ನಡೆದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಜೂನ್ ತಿಂಗಳಲ್ಲಿ ನಡೆದ ಕಳ್ಳಸಾಗಣೆಯ ಪೈಕಿ ಒಂದು ಪ್ರಕರಣದಲ್ಲಿ 33 ಕಿಲೋ ಚಿನ್ನವನ್ನು ಮಲಪ್ಪುರಂ ನಿವಾಸಿ ಸೇತಲವಿ ಹೆಸರಿನಲ್ಲಿ ತರಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಸೇತಲವಿ ಮತ್ತು ಮಧ್ಯವರ್ತಿ ಅನ್ವರ್ ಅವರನ್ನು ಬುಧವಾರ ಬಂಧಿಸಿದ್ದಾರೆ. ಕಳ್ಳಸಾಗಣೆ ಮೂಲಕ ತಂದ ಚಿನ್ನ ಈಗಾಗಲೇ ಬೇರೆ ಬೇರೆ ಜುವೆಲ್ಲರಿಗಳಿಗೆ ತಲುಪಿದೆ. ಈ ಪೈಕಿ ಎಸ್ಎಸ್ ಜುವೆಲ್ಲರಿ ಮುಖ್ಯಸ್ಥನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!
ಏರ್ ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೆಟ್ಟಿಗೆ ಹೊರಗೆ ತೆಗೆದುಕೊಂಡು ಹೋಗಲು ಬಿಡದೇ ಇದ್ದ ಸಂದರ್ಭದಲ್ಲಿ ಸ್ವಪ್ನಾ ಸುರೇಶ್ ಮತ್ತು ಸರಿತ್ 13 ಸಲ ಭೇಟಿ ಮಾಡಿದ್ದರು. ಈ ಘಟನೆ ಜುಲೈ 3 ರಂದು ಏಳು ಬಾರಿ ಮತ್ತು 4 ರಂದು ಆರು ಬಾರಿ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೆಟ್ಟಿಗೆ ವಶಪಡಿಸಿಕೊಂಡ ದಿನ ಒಂದು ಸಲ ಭೇಟಿಯಾಗಿದ್ದರು.
ಇದನ್ನೂ ಓದಿ: ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!
ಜುಲೈ 5ರಂದು ಬೆಳಗ್ಗೆ ಚಿನ್ನದ ಪೆಟ್ಟಿಗೆ ಬಿಡಿಸಿಕೊಂಡು ಬರುವುದಕ್ಕೆ ಸರಿತ್ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಇದೇ ವೇಳೆ, ಆತ ಅಲ್ಲಿ ಬಂಧಿಸಲ್ಪಟ್ಟಿದ್ದ. ಸ್ವಪ್ನಾ ಸುರೇಶ್ ಆಗ ಸೆಕ್ರಟೇರಿಯೆಟ್ ಸಮೀಪ ಇರುವ ವಿವಾದಿತ ಫ್ಲ್ಯಾಟ್ಗೆ ತೆರಳಿದ್ದಾಳೆ. ಅಲ್ಲಿ ಆಕೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ರ ತನಕ ಹಲವರಿಗೆ ಫೋನ್ ಮಾಡಿದ್ದಳು. ಸರಿತ್ ಬಂಧನದ ಸುದ್ದಿ ಬಂದ ಕೂಡಲೇ ಆಕೆ ಅಲ್ಲಿಂದ ಅಂಬಲಮುಕ್ಕು ಎಂಬಲ್ಲಿರುವ ಫ್ಲ್ಯಾಟ್ಗೆ ಹೋಗಿದ್ದಾಳೆ ಎಂಬ ಅಂಶವನ್ನು ಆಕೆಯ ಫೋನ್ ಲೊಕೇಷನ್ ದೃಢೀಕರಿಸಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್: ಸ್ವಪ್ನಾ ಸುರೇಶ್ ಎನ್ಐಎ ಕಸ್ಟಡಿಗೆ