ನವದೆಹಲಿ: ಸನಾತನ ಧರ್ಮವನ್ನು ವಿಶ್ವಾದ್ಯಂತ ಪ್ರಚಾರ ಮಾಡಲು ಮೀಸಲಾದ ಇಸ್ಕಾನ್ ಸಂಘಟನೆಯ ಸಂನ್ಯಾಸಿಯೊಬ್ಬರು, ದಾರ್ಶನಿಕರಾದ ಸ್ವಾಮಿ ವಿವೇಕಾನಂದ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು ಪರಿಣಾಮವಾಗಿ ಸಂಘಟನೆಯಿಂದಲೇ ನಿಷೇಧಿತರಾಗಿದ್ದಾರೆ.
ಈ ಕುರಿತಾಗಿ ಇಸ್ಕಾನ್, ಮಂಗಳವಾರ (ಜು.11) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಮೋಘ ಲೀಲಾ ಪ್ರಭು ಅವರು ಸ್ವಾಮಿ ವಿವೇಕಾನಂದ ಮತ್ತು ಅವರ ಗುರುಗಳ ಬಗ್ಗೆ “ಆಕ್ಷೇಪಾರ್ಹ” ಹೇಳಿಕೆ ನೀಡಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ. ಆದ್ದರಿಂದ, ಅವರು ತಮ್ಮ ಟೀಕೆಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಒಂದು ತಿಂಗಳ ಕಾಲ ಸಾಮಾಜಿಕ ಜೀವನದಿಂದ ದೂರವಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿದೆ.
ಯಾರು ಈ ಸ್ವಾಮಿ ಅಮೋಘ ಲೀಲಾ ದಾಸ್?
ಅಮೋಘ ಲೀಲಾ ದಾಸ್ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ವ್ಯಕ್ತಿ. ಧರ್ಮ ಮತ್ತು ಪ್ರೇರಣೆಯ ಕುರಿತಾದ ಅವರ ವೀಡಿಯೊಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಮಾನ್ಯವಾಗಿ ಟ್ರೆಂಡ್ ಆಗುತ್ತವೆ.
ವೆಬ್ನಲ್ಲಿ ಅಮೋಘ ಲೀಲಾ ದಾಸ್ ಬಗ್ಗೆ ಬರಹ ರೂಪದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಯೂಟ್ಯೂಬ್ನಲ್ಲಿ ಅವರ ಕೆಲವು ವೀಡಿಯೊ ಸಂದರ್ಶನಗಳ ಪ್ರಕಾರ, ಅಮೋಘ್ ಲೀಲಾ ದಾಸ್ ಅವರು ಲಖನೋದ ಧಾರ್ಮಿಕ ಕುಟುಂಬದಲ್ಲಿ ಆಶಿಶ್ ಅರೋರಾ ಆಗಿ ಜನಿಸಿದರು ಎಂದು ಹೇಳಲಾಗುತ್ತದೆ.
ಸ್ವಾಮಿ ಅಮೋಘ ಲೀಲಾ ದಾಸ್ ನೀಡಿದ ಹೇಳಿಕೆ ಏನು?
ಸನ್ಯಾಸಿಯಾಗಿರುವ ಅಮೋಘ ಲೀಲಾ ದಾಸ್, ತಮ್ಮ ಪ್ರವಚನವೊಂದರಲ್ಲಿ, ಸ್ವಾಮಿ ವಿವೇಕಾನಂದರು ಮಾಡುತ್ತಿದ್ದ ಮೀನಿನ ಸೇವನೆಯನ್ನು ಪ್ರಶ್ನಿಸಿದ್ದು, ಸದ್ಗುಣಶೀಲ ವ್ಯಕ್ತಿಯು ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದ್ದರು.
“ಸದ್ಗುಣಿ ಎಂದಾದರೂ ಮೀನು ತಿನ್ನುತ್ತಾನಾ? ಮೀನು ಕೂಡ ನೋವನ್ನು ಅನುಭವಿಸುತ್ತದೆ ತಾನೆ? ಹಾಗಾದರೆ ಸದ್ಗುಣವಂತನು ಮೀನು ತಿನ್ನುವನೇ?” ಅಮೋಘ ಲೀಲಾ ದಾಸ್ ಅವರು ಸಭೆಯನ್ನು ಉದ್ದೇಶಿಸಿ ಕೇಳಿದ್ದರು. ಅವರು ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರನ್ನೂ ಈ ಸಂದರ್ಭ ಕೆಣಕಿದ್ದರು.
ಇಸ್ಕಾನ್ ತನ್ನ ಹೇಳಿಕೆಯಲ್ಲಿ, “ಈ ಇಬ್ಬರು ವ್ಯಕ್ತಿಗಳ ಶ್ರೇಷ್ಠ ಬೋಧನೆಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದ ಅಮೋಘ್ ಲೀಲಾ ದಾಸ್ ಅನುಚಿತ ಮತ್ತು ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದು ಇದರಿಂದ ನೋವಾಗಿದೆ” ಎಂದು ಹೇಳಿದೆ. ಅವರನ್ನು ಇಸ್ಕಾನ್ನಿಂದ ಒಂದು ತಿಂಗಳ ಅವಧಿಗೆ ನಿಷೇಧಿಸಲಾಗುವುದು ಎಂದು ಹೇಳಲಾಗಿದೆ. (ಏಜೆನ್ಸೀಸ್)