ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಕೊಲೆಯೋ, ಆತ್ಮಹತ್ಯೆಯೋ? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಹಲವಾರು ಸಂಸ್ಥೆಗಳಿಂದ ತನಿಖೆ ನಡೆಯುತ್ತಿದ್ದರೂ ಉತ್ತರ ಸಿಕ್ಕಿಲ್ಲ. ಹಾಗಂತ ಸುಮ್ಮನಿರಲಾಗದೆ ಸುಶಾಂತ್ ಗೆಳೆಯರಿಬ್ಬರು ‘ಗಾಂಧಿಗಿರಿ’ಗೆ ಮುಂದಾಗಿದ್ದಾರೆ.
ಸುಶಾಂತ್ ಗೆಳೆಯರಾದ ಗಣೇಶ್ ಹಿವಾಕರ್ ಮತ್ತು ಅಂಕಿತ್ ಆಚಾರ್ಯ ಎಂಬವರೇ ‘ಗಾಂಧಿಗಿರಿ’ಗೆ ಮುಂದಾದವರು. ಮಾದಕವಸ್ತು ನಿಯಂತ್ರಣ ವಿಭಾಗ (ಎನ್ಸಿಬಿ) ತನಿಖೆ ನಡೆಸುತ್ತಿದ್ದರೂ ಅಲ್ಲಿಂದ ನಮಗಿನ್ನೂ ಯಾವುದೇ ಅಪ್ಡೇಟ್ ಸರಿಯಾಗಿ ಸಿಕ್ಕಿಲ್ಲ. ಹೀಗಾಗಿ ನಾವು ಈ ಹಾದಿ ಹಿಡಿದಿದ್ದೇವೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಅಕ್ಟೋಬರ್ 2ರಿಂದ 3 ದಿನಗಳ ಕಾಲ ನಾವು ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಸುಶಾಂತ್ ಸಾವಿನ ಬಗ್ಗೆ ನ್ಯಾಯ ಕೋರಿ ನಾವು ಆರಂಭದಿಂದಲೂ ಒತ್ತಾಯಿಸುತ್ತಿದ್ದರೂ ಕಳೆದ ಕೆಲವು ದಿನಗಳಿಂದ ಎನ್ಸಿಬಿಯಿಂದ ಯಾವುದೇ ಮಾಹಿತಿ ಇಲ್ಲ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ. ದೆಹಲಿ ಪೊಲೀಸರು ಅನುಮತಿ ನೀಡಿದರೆ ರಾಜ್ಘಾಟ್ನಲ್ಲಿ ಉಪವಾಸ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮ ಮನೆಯಲ್ಲೇ ಉಪವಾಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)