ಚಿಕ್ಕಬಳ್ಳಾಪುರ: ರಾಜಕೀಯ ದ್ವೇಷದಿಂದ ಕೇಂದ್ರ ಸರ್ಕಾರವು ಕರ್ನಾಟಕದ ಮೇಲೆಯೇ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.
ರಾಜ್ಯಕ್ಕೆ ಬರ ಪರಿಹಾರ, ತೆರಿಗೆ ಪಾಲಿನ ಹಂಚಿಕೆ ಸೇರಿದಂತೆ ವಿವಿಧ ನೆರವಿನ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕೆöÊ ದು ದಿನಗಳಿಂದಲೂ ಬಿಜೆಪಿಯ ಪ್ರಚಾರದ ದಿಕ್ಕು ಬದಲಾಗಿದೆ. ವಿಕಸಿತ ಭಾರತದ ಬದಲಿಗೆ ಸಂಪತ್ತಿನ ಹಂಚಿಕೆ, ಧರ್ಮಾಧಾರಿತ ವಿಷಯಗಳನ್ನು ಮುಂಚೂಣಿಗೆ ತರಲಾಗುತ್ತಿದೆ. ಹೊಟ್ಟೆಪಾಡಿನ, ಅಭಿವೃದ್ಧಿಯ ವಿಚಾರಗಳನ್ನು ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ತೀವ್ರ ಬರಗಾಲ ಇದೆ. ಇದಕ್ಕೆ ತ್ವರಿತವಾಗಿ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ಒತ್ತಾಯಿಸಿತ್ತು. ಇದರ ಜತೆಗೆ ಕೇಂದ್ರ ಅಧ್ಯಯನ ತಂಡವು ವರದಿ ನೀಡಿದ್ದು ಆದರೂ ಇದುವರೆಗೂ ಪರಿಹಾರವನ್ನು ಕೊಟ್ಟಿಲ್ಲ. ತೆರಿಗೆ ಪಾಲಿನ ಹಂಚಿಕೆಯಲ್ಲೂ ತಾರತಮ್ಯ ತೋರಲಾಗಿದೆ ಎಂದು ಆರೋಪಿಸಿದ್ದಾರೆ.
ದಕ್ಷಿನ ಭಾರತದಲ್ಲಿ ಗೆಲ್ಲುವ ಸೀಟುಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಆತಂಕದಲ್ಲಿರುವ ಬಿಜೆಪಿ ಈಗ, ಹತಾಶೆ ಭಾವನೆಯಲ್ಲಿ ದ್ವೇಷ ರಾಜಕಾರಣವನ್ನು ಅನುಸರಿಸುತ್ತಿದೆ. ಆದರೆ, ದ್ವೇಷದ ಭಾಷಣಗಳಿಂದ ಹೊಟ್ಟೆ ತುಂಬುವುದಿಲ್ಲ ಎಂಬ ಅರಿವು ಸಾಮಾನ್ಯ ಜನರಲ್ಲಿದ್ದು ಮೌನ ಕ್ರಾಂತಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಯಾವುದೇ ಜಾತಿ ಧರ್ಮ ನೋಡದೇ ಗ್ಯಾರಂಟಿ ಯೋಜನೆಯ ಸವಲತ್ತುಗಳನ್ನು ಒದಗಿಸುತ್ತಿದೆ. ಮೊದಲಿನಿಂದಲೂ ಎಲ್ಲ ಜಾತಿಗಳನ್ನು ಒಗ್ಗೂಡಿಸಿಕೊಂಡು ಹೋಗುವುದನ್ನು ರೂಢಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
* ಹೆಸರಿಗೆ ಮಾತ್ರ ಜಾತ್ಯತೀತ
ಜೆಡಿಎಸ್ ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷವಾಗಿದೆ. ಕೋಮುವಾದಿ ಬಿಜೆಪಿಯೊಂದಿಗೆ ಸೇರಿಕೊಂಡಿದೆ. ರೈತರನ್ನು ಕಡೆಗಣಿಸಿ, ಶ್ರೀಮಂತರ ಪರ ಇರುವ ಪಕ್ಷದ ಜತೆಗೆ ಕೈ ಜೋಡಿಸಿದೆ ಎಂದು ಕಂದಾಯ ಸಚಿವರು ವ್ಯಂಗ್ಯವಾಡಿದ್ದಾರೆ.
* ಮುಂಬರುವ ದಿನಗಳಲ್ಲಿ ರಾಜ್ಯದಿಂದ ಒಕ್ಕಲಿಗರು ಮುಖ್ಯಮಂತ್ರಿಯಾಗಲಿದ್ದಾರೆ. ಈ ಮಾತನ್ನು ಬಿಜೆಪಿಗೆ ಹೇಳಲು ಸಾಧ್ಯವೇ?. ಮೊದಲಿನಿಂದಲೂ ಸಮುದಾಯಕ್ಕೆ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡಿದೆ.
ಕೃಷ್ಣಭೈರೇಗೌಡ, ಕಂದಾಯ ಸಚಿವ