ಗುಂಟೂರು: ಆಂಧ್ರ ಪ್ರದೇಶದ ಗುಂಟೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಎನ್ ಮನೋಜ್ಞ (29) ಮತ್ತು ಮಗಳು ತುಳಸಿ (9 ತಿಂಗಳು) ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣವು ಶವಪರೀಕ್ಷೆಯ ಬಳಿಕ ಹೊಸ ತಿರುವು ಪಡೆದುಕೊಂಡಿದೆ. ಪೋಸ್ಟ್ ಮಾರ್ಟಮ್ಗೂ 36 ರಿಂದ 48 ಗಂಟೆಗಳ ಮುಂಚೆಯೇ ತಲೆಗೆ ಆದ ಗಂಭೀರ ಗಾಯದಿಂದ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.
ಮರಣೋತ್ತರ ವರದಿ ಬಂದ ಬೆನ್ನಲ್ಲೇ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ ಇದೀಗ ಕೊಲೆ ತಿರುವು ಪಡೆದುಕೊಂಡಿದೆ. ಮನೋಜ್ಞ ಪತಿ ಕಲ್ಯಾಣ್ಚಂದ್ರ ಮತ್ತು ಅತ್ತೆಯೇ ಕೊಲೆ ಮಾಡಿದ್ದಾರೆಂದು ಮನೋಜ್ಞ ಕುಟುಂಬ ದೂರು ನೀಡಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಹೋದ ಟಿವಿ ರಿಪೋರ್ಟರ್ಗೆ ಗೆಟ್ ಔಟ್ ಎನ್ನುತ್ತ ಹಲ್ಲೆ ಮಾಡಿದ ಡ್ರಗ್ ಪೆಡ್ಲರ್ ಅಪ್ಪ
ಮನೋಜ್ಞ ಹೈದರಾಬಾದ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೂರು ವರ್ಷಗಳ ಹಿಂದೆಯೇ ಕಲ್ಯಾಣ್ಚಂದ್ರ ಮದುವೆಯಾಗಿದ್ದಳು. ಪತಿ ಒಪ್ಪಂದದ ಮೇಲೆ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಗುಂಟೂರಿನ ಲಕ್ಷ್ಮೀಪುರಂ ಏರಿಯಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ದಂಪತಿ ನೆಲೆಸಿದ್ದರು.
ಇದೇ ಕಟ್ಟಡದಿಂದ ತನ್ನ ಮಗಳೊಂದಿಗೆ ಜಿಗಿದು ಆಗಸ್ಟ್ 29 ರಂದು ಮನೋಘ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರಳೆಂದು ಹೇಳಲಾಗಿತ್ತು. ಅಲ್ಲದೆ, ಸಾವಿನ ಬೆನ್ನಲ್ಲೇ ಮನೋಜ್ಞ ಮೃತದೇಹದಲ್ಲಿ ಕೋವಿಡ್ 19 ಸೋಂಕು ಸಹ ಪತ್ತೆಯಾಗಿತ್ತು. ತನ್ನ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅತ್ತೆಯು ಸಹ ಹೇಳಿದ್ದಳು. ಆದರೆ, ಯಾವ ಕಾರಣಕ್ಕೆ ಎಂಬುದನ್ನು ಹೇಳಿರಲಿಲ್ಲ. ಆದಾಗ್ಯೂ ಮನೋಜ್ಞ ಪಾಲಕರಿಗೆ ಒಂದು ಸಣ್ಣ ಅನುಮಾನ ಹೊಗೆಯಾಡತೊಡಗಿತು. ಕಟ್ಟಡದಿಂದ ಕೆಳಗೆ ನೂಕಿ ಮಗಳನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದರು.
ಘಟನೆ ಬಗ್ಗೆ ಮಾತನಾಡಿರುವ ಮನೋಘ್ನ ತಾಯಿ ವಿಜಯಲಕ್ಷ್ಮೀ, ಕಟ್ಟಡದಿಂದ ಕೆಳಗೆ ಬಿದ್ದರೂ ಮಗಳ ದೇಹದಲ್ಲಿ ಯಾವುದೇ ರಕ್ತ ಕಲೆ ಆಗಿರಲಿಲ್ಲ. ಹೆಚ್ಚುವರಿ ವರದಕ್ಷಿಣೆಗಾಗಿ ಮಗಳಿಗೆ ಅತ್ತೆ ಕಿರುಕುಳ ನೀಡುತ್ತಿದ್ದಳು. ಅತ್ತೆಯ ಹಿಂಸೆಯಿಂದಾಗಿ ಅಪಾರ್ಟ್ಮೆಂಟ್ನಲ್ಲಿ ಪತಿಯೊಂದಿಗಿರಲು ಆಗುವುದಿಲ್ಲ ಎಂದಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮನೋಜ್ಞ ಅತ್ತೆ ಹೇಳುವ ಪ್ರಕಾರ ಸೊಸೆ ಕಟ್ಟಡದಿಂದ ಜಿಗಿದು ಆಗಸ್ಟ್ 29ರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಮರಣೋತ್ತರ ವರದಿಯ ಪ್ರಕಾರ ಇದಕ್ಕೂ ಮುಂಚೆಯೇ ಆಕೆ ಸಾವಿಗೀಡಾಗಿರುವುದಾಗಿ ತಿಳಿದುಬಂದಿದ್ದು, ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಲ್ಯಾಣ್ಚಂದ್ರನ ಕರೆ ಮಾಹಿತಿಗಳನ್ನು ಕಲೆಹಾಕಿ ಪುರಾವೆಗಾಗಿ ಪರಿಶೀಲಿಸುತ್ತಿದ್ದು, ಆದಷ್ಟು ಬೇಗ ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)
ಅಕ್ಟೋಬರ್ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?