ಹುಕ್ಕೇರಿ: ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಜ್ಗೆ 2019-20ನೇ ಸಾಲಿನ ಅವಧಿಯಲ್ಲಿ ಕಬ್ಬು ಪೂರೈಸಿದ ರೈತರಿಗೆ ಟನ್ಗೆ 2500 ರೂ. ಸಂಪೂರ್ಣ ಬಿಲ್ ಅನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
ಸ್ಥಳೀಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ರೋಗದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಇದರಿಂದ ರೈತರು ಹಣವಿಲ್ಲದೆ, ಪರಿತಪಿಸುವಂತಾಗಿದೆ.
ಕಾರ್ಖಾನೆಯ ಆರ್ಥಿಕ ಸಂಕಷ್ಟದ ಮಧ್ಯೆಯೂ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಣ ಸಂದಾಯ ಮಾಡಿದ್ದೇವೆ ಎಂದರು. ಸಂಕೇಶ್ವರ ಕಾರ್ಖಾನೆಯಿಂದ 4ಲಕ್ಷ 89 ಸಾವಿರ ಮೆಟ್ರಿಕ್ ಟನ್ ಹಾಗೂ ವಿಶ್ವರಾಜ
ಶುಗರ್ಸ್ನಿಂದ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ.
ಮುಂಬರುವ ಹಂಗಾಮಿನಲ್ಲಿ ಕಬ್ಬು ಸಾಗಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ರೈತರು ಆಯಾ ಗ್ರಾಮಗಳಲ್ಲಿ ಕಬ್ಬು ಸಾಗಾಟಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ನಿರ್ದೇಶಕ ಪರಗೌಡ ಪಾಟೀಲ, ಶಿವಾನಂದ ಹಿರೇಮಠ ಇದ್ದರು.