ಹುಬ್ಬಳ್ಳಿ: ಹುಬ್ಬಳ್ಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಮೂವರು ದೇಶ ದ್ರೋಹಿ ವಿದ್ಯಾರ್ಥಿಗಳನ್ನು ಪೊಲೀಸರು ಮತ್ತೊಮ್ಮೆ ಅರೆಸ್ಟ್ ಮಾಡಿದ್ದು ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಕಾಶ್ಮೀರ ಮೂಲದವರಾದ ಅಮಿರ್, ಬಾಸಿಬ್ ಮತ್ತು ತಾಲಿಬ್ ತಮ್ಮ ಹಾಸ್ಟೆಲ್ ರೂಮಿನಲ್ಲಿ ಕುಳಿತುಕೊಂಡು ಪಾಕಿಸ್ತಾನ ಪರವಾಗಿ ಘೋಷಣೆ ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೇಶದೊಳಗಿದ್ದು ದೇಶದ್ರೋಹಿ ಚಿಂತನೆ ನಡೆಸುತ್ತಿದ್ದ ಅವರನ್ನು ಮೊನ್ನೆ ಪೊಲೀಸರು ಬಂಧಿಸಿದ್ದರು. ಆದರೆ ನಿನ್ನೆ(ಫೆ.16) ಸಿಆರ್ಪಿಸಿ ಬಾಂಡ್ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದರು.
ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದ್ದರ ಕುರಿತಾಗಿ ರಾಜ್ಯದ ಜನರು ಭಾರೀ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆ ಅವರನ್ನು ಮತ್ತೆ ಬಂಧಿಸಲಾಗಿದ್ದು ಇಂದು ಗೋಕುಲ್ ರೋಡ್ನ ಪೊಲೀಸರು ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ್ದರು.
ಆರೋಪಿಗಳು ಕೋರ್ಟ್ನಿಂದ ಹೊರಬರುತ್ತಿದ್ದಂತೆಯೇ ಹಿಂದೂಪರ ಕಾರ್ಯಕರ್ತರ ಆರೋಪಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ವಕೀಲರು ಸಹ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಪರ ಕಾರ್ಯಕರ್ತರು ಆರೋಪಿಗಳಿದ್ದ ಪೊಲೀಸ್ ವಾಹನಕ್ಕೆ ಚಪ್ಪಲಿ, ಬೂಟು ಎಸೆದು ಹಲ್ಲೆಗೆ ಯತ್ನಿಸಿದ್ದಾರೆ.
ದೇಶ ದ್ರೋಹ ಪ್ರಕರಣದಡಿ ಬಂಧಿತರಾಗಿರುವ ಮೂವರನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನದಲ್ಲಿಡುವುದಾಗಿ ತಿಳಿಸಲಾಗಿದೆ, ನ್ಯಾಯಾಧೀಶೆ ಶ್ರೀಮತಿ ಪುಷ್ಪಾವತಿ ಜೋಗೊಜಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ಹೊರಡಿಸಿದ್ದಾರೆ.