ಸವಣೂರ: ಶಾಲೆಯ ಎದುರಲ್ಲಿ ಚರಂಡಿ ನಿರ್ವಿುಸಲು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ್ದರಿಂದ ಎಸ್ಡಿಎಂಸಿ ಸದಸ್ಯರು ವಿದ್ಯಾರ್ಥಿಗಳೊಂದಿಗೆ ತಾಲೂಕಿನ ಚಿಲ್ಲೂರಬಡ್ನಿ ಗ್ರಾಪಂ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಎದುರು ಕೊಳಚೆ ನೀರು ಹರಿಯುತ್ತಿದೆ. ನಿತ್ಯವೂ ಕೊಳಚೆಯಲ್ಲಿ ದಾಟಿ ಶಾಲೆಗೆ ಹೋಗುವ ಸ್ಥಿತಿಯಿದೆ. ಶಾಲೆಯ ಎಡಭಾಗದಿಂದ ಕೊಳಚೆ ನೀರು ಬಲಭಾಗಕ್ಕೆ ಹರಿದು ಹೋಗಲು ಸೂಕ್ತ ಚರಂಡಿ ಇಲ್ಲದ ಕಾರಣ ಕೊಳಚೆ ನೀರು ಸಂಪೂರ್ಣವಾಗಿ ಶಾಲೆಯ ಎದುರಲ್ಲಿ ಜಮಾವಣೆಗೊಳ್ಳುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಎಸ್ಡಿಎಂಸಿ ಅಧ್ಯಕ್ಷ ಚನ್ನಪ್ಪ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಒ ಶಂಭುಲಿಂಗ ನಾಡರ ಮಾತನಾಡಿ, ಗ್ರಾಮ ಪ್ರವೇಶಿಸುವ ಮುಖ್ಯರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಗ್ರಾಪಂ ವತಿಯಿಂದ ಚರಂಡಿ ನಿರ್ವಣಕ್ಕೆ ತಾಂತ್ರಿಕ ಅಡ್ಡಿಯಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ಆಗಮಿಸಿ ಕ್ರಿಯಾ ಯೋಜನೆ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮುಂದಿನ ಒಂದು ವಾರದೊಳಗೆ ಶಾಲೆಯ ಎದುರು ಚರಂಡಿ ನಿರ್ವಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ. ಕೂಡಲೆ ಅವಶ್ಯವಾಗಿರುವ ಕಾಮಗಾರಿ ಆರಂಭಿಸಲಾಗುವುದು ಎಂದು ಮನವರಿಕೆ ಮಾಡಿಕೊಟ್ಟರು.
ನಂತರ, ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಸದಸ್ಯರಾದ ನಿಂಗಪ್ಪ ವಗ್ಗನವರ, ಚನ್ನಪ್ಪ ದೊಡ್ಡಮನಿ, ಯಲ್ಲಪ್ಪ ಬಡಮ್ಮನವರ, ಸೋನಿಯಾ ಮೇಟಿ, ವಿದ್ಯಾರ್ಥಿಗಳ ಪಾಲಕರು ಇದ್ದರು.