ಉಡುಪಿ: ಆತ್ಮನಿರ್ಭರ ಭಾರತಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ.ಮೋಹನ್ ಭಾಗವತ್ ಕರೆ ನೀಡಿದರು.
ಮಣಿಪಾಲ ಮಾಹೆ ಸಂಸ್ಥೆಗೆ ಎರಡು ದಿನಗಳ ಭೇಟಿ ನೀಡಿರುವ ಅವರು ಮಂಗಳವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಅನಾಟಮಿ ಮತ್ತು ಪೆಥಾಲಜಿ ಮ್ಯೂಸಿಯಂ ಡಿಜಿಟಲೈಸೇಶನ್ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿದ್ಯಾರ್ಥಿಗಳನ್ನು ಆತ್ಮನಿರ್ಭರ ಭಾರತಕ್ಕೆ ಅನುಕೂಲಕರವಾಗಿ ಬೆಳೆಸಿ ಇತರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು. ಆತ್ಮನಿರ್ಭರ ಭಾರತಕ್ಕೆ ಅಗತ್ಯವಾದ ಆತ್ಮವಿಶ್ವಾಸ, ಉತ್ತಮತನ, ಜನರ ಸೇವೆ ಸಲ್ಲಿಸುವ ಹಂಬಲ, ಹಿರಿಯರಿಗೆ ಗೌರವ ಇತ್ಯಾದಿ ಅಗತ್ಯದ ಪದ್ಧತಿಗಳನ್ನು ಜಾರಿಗೊಳಿಸುವುದು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಬಲಪಡಿಸುವ ಶಿಕ್ಷಣ ಪದ್ಧತಿಗಳು ಇಲ್ಲಿವೆ ಎಂದು ಶ್ಲಾಘಿಸಿದರು. ವಿವಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು.
ಮಾಹೆ ಟ್ರಸ್ಟ್ ಮತ್ತು ಬೆಂಗಳೂರಿನ ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ಅಧ್ಯಕ್ಷ ಡಾ.ರಂಜನ್ ಪೈ. ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಮತ್ತಿತರರಿದ್ದರು.