ಹನೂರು: ರಾಮಾಪುರ ಭಾಗದ ಕೆಲವು ಗ್ರಾಮಗಳ ರೈತರಿಗೆ ನೀಡಿರುವ ಸಾಗುವಳಿ ಜಮೀನಿಗೆ ಆರ್ಟಿಸಿ ನೀಡಬೇಕು ಎಂದು ವಿದ್ಯಾವಂತ ನಿರುದ್ಯೋಗಿಗಳ ಸಂಘದ ರಾಜ್ಯಾಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಒತ್ತಾಯಿಸಿದರು.
ರಾಮಾಪುರ ಭಾಗದ ಎಲ್ಪಿಎಸ್ ಪ್ರಾಜೆಕ್ಟ್ನಲ್ಲಿ ಸುಮಾರು 150 ರೈತರಿಗೆ 1979ರಲ್ಲಿ ಸರ್ಕಾರ ಸಾಗುವಳಿ ಜಮೀನು ನೀಡಿದ್ದು, ಕೃಷಿ ಮಾಡುತ್ತಿದ್ದಾರೆ. ಆದರೆ ಈವರೆಗೂ ಆರ್ಟಿಸಿ ನೀಡಿಲ್ಲ. ಪರಿಣಾಮ ರೈತರು ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ದಂಟಳ್ಳಿ ಭಾಗದಲ್ಲಿ ಈ ಹಿಂದೆ 150 ರೈತರು ತಲಾ 3 ಎಕರೆಯಲ್ಲಿ ಕೃಷಿ ಮಾಡುತ್ತಿದ್ದು, ಅದು ಕಂದಾಯ ಇಲಾಖೆಗೆ ಸೇರಿದೆ. ಆದರೆ ಅರಣ್ಯ ಇಲಾಖೆ ಈ ಜಾಗ ನಮಗೆ ಸೇರಿದ್ದು ಎಂದು ರೈತರಿಗೆ ವಿನಾ ಕಾರಣ ತೊಂದರೆ ನೀಡುತ್ತಿದೆ. ಈ ಸಂಬಂಧ ರೈತರು ತಾಲೂಕು ಕಚೇರಿಯ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ಸರ್ವೇ ನಡೆಸಿ ಸಾಗುವಳಿ ಜಮೀನಿಗೆ ಆರ್ಟಿಸಿ ನೀಡಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ಜ.22 ರಂದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಮುಖಂಡರಾದ ಪುಟ್ಟಮಾದಯ್ಯ, ಕೃಷ್ಣಪ್ಪ, ರಂಜಿತ್ಕುಮಾರ್, ಮರಿಯ ಲೂಯಿಸ್, ಅಂಥೋಣಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.