ಬೆಂಗಳೂರು: ದೇವಸ್ಥಾನ, ಯಾವುದೋ ಧಾರ್ಮಿಕ ಸಮಾರಂಭಗಳಿಗೆ ಹೋದಾಗಿನ ಟೆನ್ಷನ್ ಇದೀಗ ಕೆಲವು ಕಡೆ ಮನೆಯಲ್ಲಿದ್ದಾಗಲೂ ತಪ್ಪಿದ್ದಲ್ಲ. ಏಕೆಂದರೆ ಸಿಲಿಕಾನ್ ಸಿಟಿಯಲ್ಲಿ ಒಂದು ಖದೀಮರ ತಂಡ ಕಾರ್ಯನಿರತವಾಗಿದೆ.
ಈ ಕಳ್ಳರ ತಂಡ ಬೀಗ ಮುರಿಯಲ್ಲ ಅಥವಾ ಬಾಗಿಲು ಒಡೆಯಲ್ಲ. ಅಸಲಿಗೆ ಮನೆಯೊಳಗಂತೂ ನುಗ್ಗುವುದೂ ಇಲ್ಲ. ಆದರೂ ಮಧ್ಯರಾತ್ರಿ ಮನೆ ಹತ್ತಿರ ಬರುತ್ತಾರೆ. ಹೌದು.. ಇವರು ಬರೋದೇ ಮಧ್ಯರಾತ್ರಿ 2 ಗಂಟೆ ಬಳಿಕ. 2ರಿಂದ 4 ಗಂಟೆ ನಡುವಿನ ಅವಧಿಯಲ್ಲಿ ಕಾರ್ಯಾಚರಣೆ ನಡೆಸುವ ಈ ತಂಡಕ್ಕೆ ಯಾರಾದರೂ ಎದುರು ಸಿಕ್ಕರೆ ಬಡಿಗೆ ಏಟು ಖಚಿತ.
ಅಂದಹಾಗೆ ಇವರು ಕದಿಯೋದು ಶೂ, ಚಪ್ಪಲಿ. ಅದರಲ್ಲೂ ದುಬಾರಿ ಬ್ರ್ಯಾಂಡ್ನ ಶೂ-ಚಪ್ಪಲಿ. ಮಧ್ಯರಾತ್ರಿ ಬಳಿಕ ಹೆಚ್ಚಾಗಿ ಅಪಾರ್ಟ್ಮೆಂಟ್ಗಳಿಗೆ ನುಗ್ಗುವ ಇವರು ಅಲ್ಲಿ ಹೊರಗೆ ಇಟ್ಟಿರುವ ಬ್ರ್ಯಾಂಡೆಡ್ ಶೂ-ಚಪ್ಪಲಿ ಕದ್ದೊಯ್ಯುತ್ತಾರೆ. ಇತ್ತೀಚೆಗೆ ರಾತ್ರೋರಾತ್ರಿ ಅಪಾರ್ಟ್ಮೆಂಟ್ಗೆ ನುಗ್ಗಿದ ಈ ತಂಡ ಬರೋಬ್ಬರಿ 55 ಜೊತೆ ಶೂ ಕಳ್ಳತನ ಮಾಡಿದೆ. ಕಳೆದ ಶುಕ್ರವಾರ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ಗೆ ನುಗ್ಗಿದ ಈ ಗ್ಯಾಂಗ್ ಅಲ್ಲಿನ ವಿಠಲ್ ನಗರದ ಪದ್ಮನಿಲಯ ರೆಸಿಡೆನ್ಸಿಗೆ ನುಗ್ಗಿದೆ. ಈ ಗ್ಯಾಂಗ್ನಲ್ಲಿದ್ದ ಐವರು ಅಪಾರ್ಟ್ಮೆಂಟ್ನ ಎಲ್ಲ ಫ್ಲ್ಯಾಟ್ಗಳ ಮುಂದೆ ಇರುವ ಶೂ-ಚಪ್ಪಲಿಗಳನ್ನು ಕದ್ದು ಚೀಲಕ್ಕೆ ತುಂಬಿಕೊಂಡು ಪರಾರಿ ಆಗಿದೆ. ಮರುದಿನ ಚಪ್ಪಲಿ ಇಲ್ಲದ್ದನ್ನು ಗಮನಿಸಿದ ನಿವಾಸಿಗರು ಸಿಸಿಟಿವಿ ಕ್ಲಿಪ್ಪಿಂಗ್ ಪರಿಶೀಲಿಸಿದಾಗ ಕಳ್ಳರ ಕೃತ್ಯ ಗಮನಕ್ಕೆ ಬಂದಿದೆ. ಈ ಸಂಬಂಧ ಅಪಾರ್ಟ್ಮೆಂಟ್ ನಿವಾಸಿ ಸಂತೋಷ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.