ಮುಂಬೈ: ಕಾಂಗ್ರೆಸ್ನಲ್ಲಿ ಚುನಾವಣೆ ಮೂಲಕ ಹೊಸ ನಾಯಕನ ಆಯ್ಕೆಯಾಗದಿದ್ದರೆ, ಇನ್ನೂ 50 ವರ್ಷ ಪಕ್ಷ ಅಧಿಕಾರದಿಂದ ದೂರವೇ ಉಳಿಯಬೇಕಾಗುತ್ತದೆ ಎಂದು ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಮತ್ತೊಬ್ಬ ಹಿರಿಯ ಕಾಂಗ್ರೆಸ್ಸಿಗ ಸಲ್ಮಾನ್ ಖುರ್ಷಿದ್, ಪಕ್ಷದ ಸಾಂಸ್ಥಿಕ ಚುನಾವಣೆ ನಡೆಯದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ನಬಿ ಹೇಳಿಕೆಯನ್ನು ಟೀಕಿಸಿದ್ದರು.
ಅಲ್ಲಿಗೆ ಕಾಂಗ್ರೆಸ್ನಲ್ಲಿ ಸದ್ಯಕ್ಕೆ ಬದಲಾವಣೆಗಳಿಲ್ಲ ಎಂಬುದು ಖಚಿತವಾದಂತಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್ನ ನಾಯಕತ್ವ ವಿಚಾರವಾಗಿ ಶಿವಸೇನೆ ಮುಖಂಡ ಸಂಜಯ್ ರಾವತ್ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ; ಆಪ್ ವಿರುದ್ಧ ಸಾಮೂಹಿಕ ಹೋರಾಟ; ಅಣ್ಣಾ ಹಜಾರೆಗೆ ಪತ್ರ ಬರೆದು ಪೇಚಿಗೆ ಸಿಲುಕಿದ್ದೇಕೆ ಬಿಜೆಪಿ?
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರುವುದರಿಂದ ರಾಹುಲ್ ಗಾಂಧಿಯನ್ನು ತಡೆದರೆ ಪಕ್ಷ ಸಂಪೂರ್ಣ ಅವನತಿಯಾಗಲಿದೆ ಎಂದು ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾದ ಅಂಕಣದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿಗೆ ಸಮರ್ಥ ಎದುರಾಳಿಯಾಗುವ ನಾಯಕರ ಕೊರತೆ ಕಾಂಗ್ರೆಸ್ನಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ 23 ನಾಯಕರು ಬಂಡಾಯವೆದ್ದು, ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾವತ್, ಪಕ್ಷದಲ್ಲಿ ಸಕ್ರಿಯವಾಗುವುದರಿಂದ ಅವರನ್ನು ಯಾರೂ ತಡೆದಿದ್ದಾರೆ. ಆದರೆ, ರಾಹುಲ್ ಗಾಂಧಿಯನ್ನು ತಡೆಯುವಲ್ಲಿ ಸಕ್ರಿಯವಾಗುವುದು ಪಕ್ಷವನ್ನು ಧ್ವಂಸಗೊಳಿಸುವ ಹಾಗೂ ಅವನತಿಯತ್ತ ಕೊಂಡೊಯ್ಯುವಲ್ಲಿ ಕಾರಣವಾಗಬಲ್ಲುದು ಎಂದು ರಾವತ್ ಹೇಳಿದ್ದಾರೆ.