ಲಾಕ್ಡೌನ್ ಸಂದರ್ಭದಲ್ಲಿ ಕರೊನಾ ವಾರಿಯರ್ಸ್ಗೆ ನಮನ ಸಲ್ಲಿಸಿ, ಅದೆಷ್ಟೋ ಜನ ಹಾಡು ಮತ್ತು ವಿಡಿಯೋಗಳನ್ನು ಮಾಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ, ಸ್ಟೀಫನ್ ಪ್ರಯೋಗ್ ಅವರ ‘ವೈದ್ಯನಾರಾಯಣ’.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಪ್ಯಾರಿಸ್ ಪ್ರಣಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಬಂದ ಸ್ಟೀಫನ್, ಆ ನಂತರ ‘ಸಂತೋಷ’ ಸೇರಿದಂತೆ ಇನ್ನೂ ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗ ಲಾಕ್ಡೌನ್ ಸಂದರ್ಭದಲ್ಲಿ ವೈದ್ಯರು ಸಲ್ಲಿಸಿದ ಸೇವೆಗೆ ಧನ್ಯವಾದಗಳನ್ನು ತಿಳಿಸುವ ನಿಟ್ಟಿನಲ್ಲಿ, ಅವರು ‘ವೈದ್ಯನಾರಾಯಣ’ ಎಂಬ ಹಾಡನ್ನು ಮಾಡಿದ್ದಾರೆ.
ಇದನ್ನೂ ಓದಿ: VIDEO: ಸುಶಾಂತ್ ಸಿಂಗ್ ಕ್ಯಾಮರಾ ಎದುರಿಸಿದ ಮೊದಲ ದೃಶ್ಯ ವೈರಲ್!
ಈ ಹಾಡು ರೂಪುಗೊಳ್ಳುವುದಕ್ಕೆ ಕಾರಣವೇನು? ವೈದ್ಯರು ತೋರಿಸಿದ ಕಾಳಜಿ ಮತ್ತು ಅವರ ಸೇವೆ ಎನ್ನುತ್ತಾರೆ ಸ್ಟೀಫನ್ ಪ್ರಯೋಗ್. ‘ಇಂತಹ ಸಂದರ್ಭದಲ್ಲಿ ವೈದ್ಯರು ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನೂ ಊಹಿಸುವುದೂ ಸಾಧ್ಯವಿಲ್ಲ. ಅವರು ತೋರಿದ ಕಾಳಜಿ, ಪ್ರೀತಿ ಸರಿಗಟ್ಟುವುದಕ್ಕೆ ಸಾಧ್ಯವಿಲ್ಲ. ಅವರ ಮೇಲೆ ಬಹಳ ಗುರುತರವಾದ ಜವಾಬ್ದಾರಿ ಇತ್ತು. ಒಂದು ಕಡೆ, ಕೋವಿಡ್ಗೆ ವ್ಯಾಕ್ಸಿನ್ ಇಲ್ಲ. ಇನ್ನೊಂದು ಕಡೆ ಅದರಿಂದ ಜೀವಕ್ಕೇ ಅಪಾಯ. ಆದರೂ ದೊಡ್ಡ ರಿಸ್ಕ್ ತೆಗೆದುಕೊಂಡು ಮನೆಯವರನ್ನೆಲ್ಲಾ ದೂರು ಇಟ್ಟು, ಜನರ ಸೇವೆ ಮಾಡಿದ್ದಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.
‘ಬರೀ ವೈದ್ಯರು ಮತ್ತು ನರ್ಸ್ಗಳಷ್ಟೇ ಅಲ್ಲ. ವಾರ್ಡ್ ಬಾಯ್ಗಳು, ಲ್ಯಾಬ್ಟೆಕ್ನೀಶಿಯನ್ಗಳು, ಪೊಲೀಸ್ … ಇವರೆಲ್ಲಾ ಒಟ್ಟಿಗೆ ಕೆಲಸ ಮಾಡಿ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದರು. ಆದರೆ, ಎಷ್ಟು ಮಾಡಿದರೂ ಅವರು ಲೈಮ್ಲೈಟ್ಗೆ ಬರುವುದಿಲ್ಲ. ಆದರೂ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಕ್ಕೆ ಮುಂದಾದ ಕರೊನಾ ವಾರಿಯರ್ಸ್ಗೆ ಈ ಹಾಡಿನ ಮೂಲಕ ನಮ್ಮದೊಂದು ಸಲಾಂ’ ಎನ್ನುತ್ತಾರೆ ಅವರು.
ಇದನ್ನೂ ಓದಿ: ‘ಕೋಟಿಗೊಬ್ಬ 3’ ಚಿತ್ರದ ಹೊಸ ಪೋಸ್ಟರ್ ರಿಲೀಸ್
ಈ ಹಾಡಿನ ವೈಶಿಷ್ಟ್ಯವೆಂದರೆ, ಇಲ್ಲಿ ಸ್ಟೀಫನ್ ಒಬ್ಬರೇ ನಮನ ಸಲ್ಲಿಸುತ್ತಿಲ್ಲ. ಸಂಗೀತಗಾರರೆಲ್ಲಾ ಒಟ್ಟಾಗಿ, ಕರೊನಾ ವಾರಿಯರ್ಸ್ಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ‘ಇದಕ್ಕೂ ಮುನ್ನ ಸಿನಿಮಾ ಕಲಾವಿದರು ಹಾಡಿನ ಮೂಲಕ ನಮನ ಸಲ್ಲಿಸಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಸಂಗೀತ ಕ್ಷೇತ್ರದವರು ಸೇರಿ ಗೌರವ ಸಲ್ಲಿಸಿರುವುದು ವಿಶೇಷ. ಗಾಯಕರು, ಸಂಗೀತಗಾರರು ಎಲ್ಲಾ ಒಟ್ಟಾಗಿ ಈ ವಿಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದೇವೆ’ ಎನ್ನುತ್ತಾರೆ ಅವರು.
ಈ ಹಾಡಿಗೆ ಅವರು ಸಂಗೀತ ಸಂಯೋಜಿಸಿದರೆ, ವಿ. ಮನೋಹರ್ ಸಾಹಿತ್ಯ ಬರೆದಿದ್ದಾರೆ. ಇನ್ನು ರಾಜೇಶ್ ಕೃಷ್ಣನ್ , ಅನುರಾಧಾ ಭಟ್, ಚೈತ್ರಾ, ಮಾನಸ ಹೊಳ್ಳ, ಶ್ರೀರಕ್ಷಾ, ಕುಶಾಲ, ದಾಕ್ಷಾಯಿಣಿ, ರೆಮೋ ಮುಂತಾದವರು ಧ್ವನಿಯಾಗಿದ್ದಾರೆ. ಇನ್ನು ಪಂಡಿತ್ ಪರಮೇಶ್ವರ ಹೆಗಡೆ, ಡಾ. ಜಯಶ್ರೀ ಅರವಿಂದ್, ಹೇಮಂತ್, ಅನುರಾಧಾ ಭಟ್, ವಾಣಿ ಹರಿಕೃಷ್ಣ, ಪ್ರವೀಣ್ ಡಿ ರಾವ್, ನಾಗಚಂದ್ರಿಕಾ ಭಟ್, ಚೈತ್ರಾ ಮುಂತಾದವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಕಾಮಕಾಂಡದಲ್ಲಿ ಘಟಾನುಘಟಿಗಳು!; ಕೆಜಿಎಫ್ ನಟಿ ಮೌನಿ ರಾಯ್, ಊರ್ವಶಿ ರೌಟೇಲಾ ಭಾಗಿ ಆರೋಪ