ನವದೆಹಲಿ: ಅಂಧರ ಕ್ರಿಕೆಟ್ ಫೆಢರೇಷನ್ ಆಫ್ ಇಂಡಿಯಾ ಆಯೋಜಿಸಿರುವ ಅಂಧರ ಟಿ-20 ವಿಶ್ವಕಪ್ಗೆ ಇಂದು(ಡಿ.6) ಹರ್ಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಹರ್ಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್, ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ, ವಿಕಲಚೇತನ ಸಂಸ್ಥೆ ಸಮರ್ಥನಮ್ ಟ್ರಸ್ಟ್ನ ಸಂಸ್ಥಾಪಕ ಡಾ.ಮಹಾಂತೇಶ್ ಭಾಗವಹಿಸಿದ್ದರು.
ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಈ ಬಾರಿಯ ಅಂಧರ ಟಿ-20 ವಿಶ್ವಕಪ್ನ ರಾಯಭಾರಿಯಾಗಿದ್ದಾರೆ. ಡಿ.6 ರಿಂದ ಡಿ. 17ರ ವರೆಗೆ ಭಾರತದಲ್ಲೇ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಅಜಯ್ ಕುಮಾರ್ ರೆಡ್ಡಿ ಮುನ್ನಡೆಸಲಿದ್ದಾರೆ.
ಅಂಧರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಬಾಂಗ್ಲಾದೇಶ, ನೇಪಾಳ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ದೇಶದ ತಂಡಗಳು ಪಾಲ್ಗೊಳ್ಳಲಿವೆ. ಮೊದಲು ಪಂದ್ಯದಲ್ಲಿ ಕಳೆದ ಸೀಸನ್ನ ಚಾಂಪಿಯನ್ ತಂಡ ಭಾರತ ಹಾಗೂ ನೇಪಾಳ ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 382 ರನ್ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ ನೇಪಾಳ ತಂಡ ನಿಗದಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 108 ರನ್ ಕಲೆ ಹಾಕಲು ಶಕ್ತವಾಯಿತು. ನೇಪಾಳ ವಿರುದ್ಧ 274 ರನ್ ಅಂತರದಿಂದ ಗೆದ್ದುಕೊಂಡಿರುವ ಭಾರತ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.