ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಶ್ರೀಲಂಕಾ, ಮತ್ತಷ್ಟು ಮುಜುಗರ ಹಾಗೂ ಸಮಸ್ಯೆಗಳಿಂದ ಬಚಾವಾಗುವ ಉದ್ದೇಶದಿಂದ ಕೈಗೊಂಡಿದ್ದ ನಿರ್ಧಾರವೊಂದನ್ನು ಒಂದೊಪ್ಪತ್ತಲ್ಲೇ ವಾಪಸ್ ಪಡೆದಿದೆ. ಆ ಮೂಲಕ ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಣಿದಿದೆ.
ದೇಶದಲ್ಲಿ ಎಲ್ಲ ಪ್ರಮುಖ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆ್ಯಪ್ಗಳ ಮೇಲೆ ನಿಷೇಧ ಹೇರಬೇಕು ಎಂದು ಭಾನುವಾರ ಬೆಳಗ್ಗೆಯಷ್ಟೇ ಆದೇಶ ಹೊರಡಿಸಿದ್ದ ಅದು ಮಧ್ಯಾಹ್ನದಷ್ಟರಲ್ಲಿ ಆ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ ಮತ್ತು ನಿಷೇಧದ ಆದೇಶವನ್ನು ವಾಪಸ್ ಪಡೆದಿದೆ.
ಟ್ವಿಟರ್, ಫೇಸ್ಬುಕ್, ಮೆಸೆಂಜರ್, ಟೆಲಿಗ್ರಾಂ, ಯೂಟ್ಯೂಬ್, ವಾಟ್ಸ್ಆ್ಯಪ್, ವೈಬರ್, ಐಎಂಒ, ಇನ್ಸ್ಟಾಗ್ರಾಂ, ಟಿಕ್ಟಾಕ್, ಸ್ನ್ಯಾಪ್ಚಾಟ್ಗಳ ಮೇಲೆ ನಿಷೇಧ ಹೇರಬೇಕು ಎಂದು ಅಲ್ಲಿನ ರಕ್ಷಣಾ ಸಚಿವಾಲಯವು ಟೆಲಿಕಮ್ಯುನಿಕೇಷನ್ ರೆಗ್ಯುಲೇಟರಿ ಕಮಿಷನ್ಗೆ ಸೂಚಿಸಿತ್ತು.
ಆದರೆ ಈ ಬಗ್ಗೆ ಕೂಡಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಈ ನಿರ್ಧಾರ ಸಾರ್ವಜನಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಅಲ್ಲಿನ ಬಾರ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿತ್ತು. ರಕ್ಷಣಾ ಸಚಿವಾಯಲದ ಸೂಚನೆ ಮೇರೆಗೆ ಟೆಲಿಕಮ್ಯುನಿಕೇಷನ್ ರೆಗ್ಯುಲೇಟರಿ ಕಮಿಷನ್ ಆಫ್ ಶ್ರೀಲಂಕಾ (ಟಿಆರ್ಸಿಎಸ್ಎಲ್) ಸೋಷಿಯಲ್ ಮೀಡಿಯಾ ಪ್ರೊವೈಡರ್ಸ್ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಶ್ರೀಲಂಕಾದ ಮಾನವ ಹಕ್ಕುಗಳ ಆಯೋಗ ಖಂಡಿಸಿತ್ತು. ಜೊತೆಗೆ ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾ ಮೇಲಿನ ನಿರ್ಬಂಧದಿಂದ ಹಿಂದೆ ಸರಿದಿದೆ.
ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್ ಠಾಕ್ರೆ