ಧಾರವಾಡ: ಯೋಗಮಯ ಕರ್ನಾಟಕ ಅಭಿಯಾನದ ಅಂಗವಾಗಿ ನಗರದ ನಂದಿಕೋಲ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಗುರುವಾರ ವಿಶೇಷ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ ಆಯೋಜಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿದ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಹಾಗೂ ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಮಾತನಾಡಿ, ಎಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡಬೇಕು.ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಯೋಗಾಭ್ಯಾಸದಲ್ಲಿ ಪ್ರಾಣಾಯಾಮ ಹಾರ್ಡ್ವೇರ್, ಧ್ಯಾನ ಸ್ಟಾವೇರ್ ಮತ್ತು ಸೂರ್ಯ ನಮಸ್ಕಾರ ಡಾಕ್ಟರ್. ಇವುಗಳ ಸಮ್ಮಿಲನದ ನಮ್ಮ ದಿನಚರಿ ಯೋಗಮಯವಾದರೆ ಶರೀರ ಮತ್ತು ಮನಸ್ಸಿಗೆ ನಾವೇ ವೈದ್ಯರಾಗಬಹುದು ಎಂದರು.
ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗದ ಪ್ರಕಾರ ಯಮ ನಿಯಮದ ಪಾಲನೆ ಮಾಡದಿದ್ದರೆ ಅದು ಕೇವಲ ವ್ಯಾಯಾಮವಾಗುತ್ತದೆ. ಪಾಲಿಸಿದರೆ ಅದು ಯೋಗವಾಗುತ್ತದೆ. ಅಷ್ಟಾಂಗ ಯೋಗದಲ್ಲಿ ಎಲ್ಲ ತರಹದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರವಿದೆ. ಸಮಾಜದ ಮತ್ತು ಜಾಗತಿಕ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸಕ್ಕೆ 1 ಗಂಟೆಯನ್ನು ಮೀಸಲಿಟ್ಟರೆ ಉಳಿದ 23 ಗಂಟೆ ಆರೋಗ್ಯವಾಗಿ ಇರಬಹುದು ಎಂದರು.
ಪತಂಜಲಿ ಯೋಗ ಸಮಿತಿಯ ರಮೇಶ ಸುಲಾಖೆ, ಎಂ..ಡಿ. ಪಾಟೀಲ, ಶೈಲಜಾ ಮಾಡಿಕರ, ಉಮಾ ಅಗಡಿ, ಲೀಲಾವತಿ ಸಾಂಬ್ರಾಣಿ, ನಾಗರಾಜ, ಮಂಜುನಾಥ, ಪ್ರವೀಣ, ರಾಜಶೇಖರ ಹುಬ್ಬಳ್ಳಿ ಹಾಗೂ ನೂರಾರು ಯೋಗ ಸಾಧಕರು ಪಾಲ್ಗೊಂಡಿದ್ದರು