ನವದೆಹಲಿ: ಮುಂದಿನ 10 ದಿನಗಳಲ್ಲಿ ಅಂದಾಜು 36 ಲಕ್ಷ ವಲಸಿಗರ ಪ್ರಯಾಣಕ್ಕೆ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಶನಿವಾರ ತಿಳಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ರೈಲ್ವೆ ಸಚಿವಾಲಯದ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಾದವ್, ಇದು ವಿಶ್ವದ ಪ್ರತಿಯೊಬ್ಬರಿಗೂ ಕಠಿಣ ಪರಿಸ್ಥಿತಿಯಾಗಿದ್ದು, ಕ್ರಮೇಣ ಸಹಜ ಸ್ಥಿತಿಗೆ ಸಾಗಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಮೇ 1 ರಿಂದ 40 ಲಕ್ಷಕ್ಕೂ ಹೆಚ್ಚು ವಲಸಿಗರು ತಮ್ಮ ಊರು ಮತ್ತು ಹಳ್ಳಿಗಳಿಗೆ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಈ ಪೈಕಿ ಶೇ.80 ಜನ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದ ವಲಸೆ ಕಾರ್ಮಿಕರೇ ಆಗಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಗಿಟಾರ್ ನುಡಿಸಲು ಸಿಎಂಗೆ ಕಾಲ ಕೂಡಿ ಬಂತು….
ಶ್ರಮಿಕ್ ವಿಶೇಷ ರೈಲುಗಳ ಪ್ರಯಾಣ ಶುಲ್ಕವನ್ನು ಕೇಂದ್ರ ಸರ್ಕಾರ ಶೇ.85 ಹಾಗೂ ಆಯಾ ರಾಜ್ಯ ಸರ್ಕಾರಗಳು ಶೇ.15 ರಷ್ಟು ಭರಿಸಲಿವೆ ಎಂದು ಯಾದವ್ ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಭಾರತದಾದ್ಯಂತ ಸಿಲುಕಿರುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಲು ಮೇ 1 ರಿಂದ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸಾಗಿಸುವ ಪ್ರಕ್ರಿಯೆ ಮುಗಿಯುವವರೆಗೂ ಶ್ರಮಿಕ್ ವಿಶೇಷ ರೈಲು ಸೇವೆ ಮುಂದುವರಿಯುತ್ತದೆ.ಎಲ್ಲ ಪ್ರಯಾಣಿಕರಿಗೆ ಉಚಿತ ಊಟ ಮತ್ತು ಕುಡಿಯುವ ನೀರನ್ನು ಒದಗಿಸಲಾಗುತ್ತದೆ ಮತ್ತು ರೈಲುಗಳು ಮತ್ತು ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ನಿಯಮಾವಳಿಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.