ಬರೇಲಿ: ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯ ಸಾನ್ಸೋಯಿ ಗ್ರಾಮದಲ್ಲಿರುವ ತಮ್ಮ ಹೊಲ-ಗದ್ದೆಗಳ ಮೇಲ್ವಿಚಾರಣೆಗೆ ತೆರಳಿದ್ದ ಸಮಾಜವಾದಿ ಪಕ್ಷದ ಮುಖಂಡ ಮತ್ತು ಅವರ ಪುತ್ರನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಚೋಟೆ ಲಾಲ್ ದಿವಾಕರ್ ಮತ್ತು ಅವರ ಪುತ್ರ ಹತರಾದವರು. ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಅಪ್ಪ ಮತ್ತು ಮಗನ ಜತೆ ಕೆಲಕಾಲ ವಾಗ್ವಾದ ನಡೆಸಿ ಬಳಿಕ ಗುಂಡು ಹಾರಿಸಿದರು. ನಂತರ ಬೈಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನೀರನ್ನು ಪೋಲು ಮಾಡುವ ಕೃತ್ಯ ಖಂಡನೀಯ, ಶಾಸಕ ಶರತ್ ಬಚ್ಚೇಗೌಡ ಬೇಸರ, ಕಿಡಿಗೇಡಿಗಳ ಬಂಧನಕ್ಕೆ ಸೂಚನೆ
ದಿವಾಕರ್ ಮತ್ತು ಅವರ ಪುತ್ರ ತಮ್ಮ ಹೊಲ-ಗದ್ದೆಗಳ ಮೇಲ್ವಿಚಾರಣೆಗೆ ಮಂಗಳವಾರ ಬೆಳಗ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಯೊಂದನ್ನು ಮಾಡಲಾಗುತ್ತಿತ್ತು. ಇದಕ್ಕೆ ದಿವಾಕರ್ ಆಕ್ಷೇಪಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿದ್ದವರೊಂದಿಗೆ ಮಾತಿಗೆ ಮಾತು ಬೆಳೆದಿತ್ತು ಎಂಬ ಮಾಹಿತಿ ದೊರೆತಿರುವುದಾಗಿ ಸಂಬಾಲ್ನ ಎಸ್ಪಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.
2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದಿವಾಕರ್ ಸ್ಪರ್ಧಿಸಿದ್ದರು. ಆದರೆ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿದಿದ್ದರು ಎಂದು ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಫಿರೋಜ್ ಖಾನ್ ಮಾಹಿತಿ ನೀಡಿದ್ದಾರೆ. ಇವರು ಹಾಗೂ ಗ್ರಾಮದ ಪ್ರಧಾನ್ ನಡುವೆ ನರೇಗಾ ಯೋಜನೆಯ ಕಾಮಗಾರಿ ಕುರಿತು ವಿವಾದ ಏರ್ಪಟ್ಟಿತ್ತು. ಇದು ಜಟಾಪಟಿಗೂ ಕಾರಣವಾಗಿತ್ತು. ಬಹುಶಃ ಇವರೇ ಅವರನ್ನು ಹತ್ಯೆ ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.