ತಿರುವನಂತಪುರಂ: ನೈಋತ್ಯ ಮಾನ್ಸೂನ್ ಮಾರುತಗಳು ಭಾನುವಾರ ಕೇರಳಕ್ಕೆ ತಲುಪಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಿಮಾಲಯ, ಬಿಹಾರ, ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಲಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯನ್ನು ತರಿಸಲಿದ್ದು, ಬಂಗಾಳ ಕೊಲ್ಲಿ ಕರಾವಳಿಯಲ್ಲೂ ಮುಂದಿನ ಎರಡು ದಿನಗಳಲ್ಲಿ ಮಳೆ ಬೀಳಲಿದೆ. ಸಾಮಾನ್ಯವಾಗಿ ಜೂನ್ 1 ರಂದು ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುವುದು ವಾಡಿಕೆ. ಈ ವರ್ಷ ಮೂರು ದಿನ ಮೊದಲೇ ಮಾನ್ಸೂನ್ ಪ್ರವೇಶವಾಗಿದೆ ಎಂದು ಐಎಂಡಿ ತಿಳಿಸಿದೆ.
ಅರಬ್ಬೀ ಸಮುದ್ರದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಕರ್ನಾಟಕ ಕರಾವಳಿಯಲ್ಲೂ ಎಚ್ಚರಿಕೆ ನೀಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದಲ್ಲೂ ಮಳೆ ಪ್ರಮಾಣ ಹೆಚ್ಚಿರಲಿದೆ ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕ ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮುಂದಿನ 24 ಗಂಟೆಯೊಳಗೆ ಮಳೆಯಾಗಲಿದ್ದು, ತಮಿಳುನಾಡು, ಪುದುಚೇರಿ ಮತ್ತು ಕರೈಕಲ್ನಲ್ಲಿ ಐದು ದಿನದ ನಂತರ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಸದ್ಯ ಮಾನ್ಸೂನ್ ಮಾರುತಗಳು 40-50 ಕಿಮೀ ವೇಗದಲ್ಲಿದ್ದು, ಇದು ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿ, ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ. ಕೇರಳದಿಂದ ಅರಬ್ಬೀ ಸಮುದ್ರದ ಮೂಲಕ ಇತ್ತ ಗುಜರಾತ್ಗೂ ನಾಳೆಯೊಳಗೆ ಮಾರುತಗಳು ತಲುಪಲಿವೆ ಎಂದು ಐಎಂಡಿ ತಿಳಿಸಿದೆ. ಒಟ್ಟಾರೆ ಈ ಬಾರಿಯ ಮಾನ್ಸೂನ್ ದೇಶಾದ್ಯಂತ ಉತ್ತಮ ಮಳೆ ತರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
VIDEO: ಏಕಾಏಕಿ ಅಂಗಡಿಯೊಳಗೆ ನುಗ್ಗಿತು ಕಾರು: ಇಲ್ಲಿದೆ ಬೆಚ್ಚಿ ಬೀಳಿಸುವ ದೃಶ್ಯ