ವಿಜಯಪುರ: ರಾಜ್ಯ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ನಿವೃತ್ತಿ ಹಾಗೂ ಬಹುತೇಕ ಬಸ್ಗಳು ಗುಜುರಿಗೆ ಹೋಗಿರುವ ಹಿನ್ನೆಲೆ ಹೊಸ ಬಸ್ ಖರೀದಿ ಮತ್ತು ಖಾಲಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
2016ರಲ್ಲಿ ನಾನು ಸಚಿವನಾಗಿದ್ದಾಗ ನೇಮಕಾತಿ ನಡೆದಿದ್ದು ಬಿಟ್ಟರೆ ಈವರೆಗೂ ನೇಮಕ ಪ್ರಕ್ರಿಯೆ ನಡೆದಿಲ್ಲ. ಬಿಜೆಪಿ ಸರ್ಕಾರದಲ್ಲಿ ನೇಮಕ ಪ್ರಕ್ರಿಯೆ ನಡೆಸಲಿಲ್ಲ. ಈವರೆಗೆ 13888 ಜನ ನಿವೃತ್ತರಾಗಿದ್ದಾರೆ. ಸಹಜವಾಗಿಯೇ ಚಾಲಕ-ನಿರ್ವಾಹಕರ ಕೊರತೆ ಕಾಡುತ್ತಿದೆ. ಹೀಗಾಗಿ 8000 ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸಲಾಗುವುದೆಂದು ಬುಧವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಬಹುತೇಕ ಬಸ್ಗಳು ಗುಜರಿಗೆ ಹೋಗಿವೆ. ಹೊಸ ಬಸ್ಗಳು ಸಹ ಬಂದಿರಲಿಲ್ಲ. ಹೀಗಾಗಿ 13800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದೆ 8000ಕ್ಕೂ ಅಧಿಕ ಬಸ್ ಖರೀದಿಗೆ ಅನುಮತಿ ಸಿಕ್ಕಿದೆ. ಪ್ರಕ್ರಿಯೆ ಪ್ರಾರಂಭವಾಗಿದೆ. ನಾಲ್ಕೈದು ತಿಂಗಳಲ್ಲಿ 5200 ಹೊಸ ಬಸ್ ಬರಲಿವೆ ಎಂದರು.
ಉಚಿತ ಬಸ್ ಸೌಲಭ್ಯದಿಂದಾಗಿ ಯಾವುದೇ ಸಮಸ್ಯೆಯಾಗಿಲ್ಲ. ಮುಖ್ಯಮಂತ್ರಿಗಳು 9 ತಿಂಗಳಿಗೆ 2800 ಕೋಟಿ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿದ್ದರು. ಮಾರ್ಚ್ ನಿಂದ ಪ್ರತಿ ತಿಂಗಳು ಹಣ ನೀಡಲಾಗುತ್ತದೆ. ಹೆಚ್ಚುವರಿ ಹಣವನ್ನು ಸಹ ಸಿಎಂ ಕೊಡುವ ಭರವಸೆ ನೀಡಿದ್ದಾರೆ. ಬಿಜೆಪಿಯವರು ಹೇಳುವ ಹಾಗೆ ಯಾವುದೇ ಸಂಬಳ ಬಾಕಿ ಇರಿಸಿಕೊಂಡಿಲ್ಲ. ಬೇಕಾದರೆ ಆರ್ಟಿಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು. ಈವರೆಗೆ ರಾಜ್ಯದಲ್ಲಿ 85 ಕೋಟಿ ಜನ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಈ ಯೋಜನೆ ಮುಂದುವರಿಯಲಿದೆ ಎಂದರು.
ಈ ಹಿಂದೆ ಈ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಬಿಜೆಪಿಯವರು ಚುನಾವಣೆಗೋಸ್ಕರ ಮಾಡುತ್ತಿದ್ದಾರೆಂದು ಆರೋಪಿಸಿದರು. ಚುನಾವಣೆ ಆಯ್ತು. ನಾವು ಗೆದ್ದೆವು. ಆ ಮೇಲೆ ಇವರು ಸಂಬಳ ಸರಿಯಾಗಿ ಕೊಡಲ್ಲ, ಯೋಜನೆ ನಿಲ್ಲಲಿದೆ ಎಂದೆಲ್ಲಾ ಟೀಕಿಸಿದರು. ಆದರೆ, ಯೋಜನೆ ನಿಂತಿತಾ? ಇನ್ನೂ 10 ವರ್ಷ ಸೌಲಭ್ಯ ಇರಲಿದೆ ಎಂದರು.
ಇನ್ನು ಮಹಾರಾಷ್ಟ್ರದಲ್ಲಿ ಮೀಸಲಾತಿ ಹೋರಾಟದಿಂದಾಗಿ ಕರ್ನಾಟಕ ಬಸ್ಗಳಿಗೆ ಧಕ್ಕೆಯಾಗುತ್ತಿರುವ ವಿಚಾರವಾಗಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಮೀಸಲಾತಿ ಹೋರಾಟ ಮಹಾರಾಷ್ಟ್ರದ ಆಂತರಿಕ ವಿಚಾರ. ಅವರು ಹೋರಾಟ ಮಾಡಿಕೊಳ್ಳಲಿ.ಆದರೆ, ಕರ್ನಾಟಕದ ಬಸ್ಗೆ ಧಕ್ಕೆ ಮಾಡಬಾರದು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಯಾರು ಬೆಂಕಿ ಹಚ್ಚುತ್ತಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಈ ಸರ್ಕಾರ ಇನ್ನೂ 10 ವರ್ಷ ಇರಲಿದೆ. ನಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.