ಬಾಲಿವುಡ್ನಲ್ಲಿ ಹೊರಗಿನವರು-ಒಳಗಿನವರು ಎಂಬ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಈ ಚರ್ಚೆಗೆ ಇನ್ನಷ್ಟು ವೇಗ ಸಿಕ್ಕಿದೆ.
ಈ ಇನ್ಸೈಡರ್-ಔಟ್ಸೈಡರ್ ಬಗ್ಗೆ ಚಿತ್ರರಂಗದ ಹಲವು ಗಣ್ಯರು ಈಗಾಗಲೇ ಸಾಕಷ್ಟು ಮಾತಾಡಿದ್ದಾರೆ. ಇದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ರಂಗಗಳಲ್ಲೂ ಈ ಹೊರಗಿನವರು ಮತ್ತು ಒಳಗಿನವರ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಈಗ ಈ ವಿಷಯವಾಗಿ ನಟ ಸೋನು ಸೂದ್ ಸಹ ಮಾತನಾಡಿದ್ದಾರೆ.
ಇದನ್ನೂ ಓದಿ: ಕಂಗನಾ ಕಂಡರೆ ಎಲ್ಲರಿಗೂ ಹೊಟ್ಟೆಉರಿ …’ಕ್ವೀನ್’ ಪರವಾಗಿ ನಿಂತ ಶತ್ರುಘ್ನ ಸಿನ್ಹಾ
ಚಿತ್ರರಂಗಕ್ಕೆ ಯಾವುದೇ ಗಾಡ್ಫಾದರ್ ಅಥವಾ ಪರಿಚಯವಿಲ್ಲದೆ ಬಂದ ಸೋನು ಸೂದ್, ಈಗ ತಮ್ಮ ಪರಿಶ್ರಮದಿಂದ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಒಬ್ಬ ಹೊರಗಿನವನು, ಇಲ್ಲಿ ಬಂದು ಕಷ್ಟಪಟ್ಟು ದೊಡ್ಡ ಹೆಸರು ಮಾಡಿದಾಗ, ಆಗ ಅದು ಎಲ್ಲರಿಗೂ ಖುಷಿಕೊಡುತ್ತದೆ. ಆದರೆ, ಈ ತರಹದ ಪ್ರಕರಣಗಳಾದಾಗ, ಎಲ್ಲರ ಮನಸ್ಸು ಛಿದ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಇಲ್ಲಿ ನಿಜಕ್ಕೂ ಸಾಕಷ್ಟು ಒತ್ತಡಗಳಿರುತ್ತವೆ. ಪ್ರತಿ ದಿನ ಸಾವಿರಾರು ಜನ ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಕೆಲವರಿಗೆ ಮಾತ್ರ ದೊಡ್ಡ ಬ್ರೇಕ್ ಸಿಗುತ್ತದೆ. ನಾನು ಇಲ್ಲಿಗೆ ಬಂದಾಗ, ನನ್ನ ಬಳಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಗ್ರಿ ಇತ್ತು. ಜನ ನನ್ನನ್ನು ಬೇರೆ ತರಹ ನೋಡಬಹುದು ಎಂದು ನನಗೆ ಅನಿಸಿತ್ತು. ಆದರೆ, ನಾನಂದುಕೊಂಡಿದ್ದು ಸುಳ್ಳು ಎಂದು ಗೊತ್ತಾಗುವುದಕ್ಕೆ ಬಹಳ ಸಮಯ ಆಗಲಿಲ್ಲ’ ಎಂದಿದ್ದಾರೆ ಸೋನು.
ಇದನ್ನೂ ಓದಿ: ಸುಶಾಂತ್ ಜತೆಗೆ ನಟಿಸದೇ ಇರೋಕೆ ಹೃತಿಕ್ ಕಾರಣ …ಹೊಸ ಬಾಂಬ್ ಸಿಡಿಸಿದ ಕಂಗನಾ
‘ಹೊರಗಿನಿಂದ ಬರುವವರಿಗೆ, ನಾನು ಹೇಳುವುದು ಒಂದೇ ಒಂದು ವಿಷಯ. ನಿಮಗೆ ಗಟ್ಟಿ ಗುಂಡಿಗೆ ಇದ್ದರೆ ಮಾತ್ರ ಬನ್ನಿ. ಇಲ್ಲವಾದರೆ ಬರಲೇ ಬೇಡಿ. ಇಲ್ಲಿ ಬಂದು, ರಾತ್ರೋರಾತ್ರಿ ಏನೋ ಮ್ಯಾಜಿಕ್ ಆಗಿ ನೀವು ದೊಡ್ಡವರಾಗುತ್ತೀರಿ ಎಂಬ ಭ್ರಮೆ ಬೇಡ. ಹಾಗೆಯೇ ಒಳ್ಳೆಯ ಫಿಸಿಕ್ ಇದೆ, ದೊಡ್ಡ ಪ್ರೊಡಕ್ಷನ್ ಹೌಸ್ವೊಂದು ತಮ್ಮ ಚಿತ್ರಕ್ಕೆ ಅವಕಾಶ ಕೊಡುತ್ತದೆ ಎಂದು ಭಾವಿಸಬೇಡಿ’ ಎಂದು ಹೇಳಿದ್ದಾರೆ ಸೋನು.
‘ಒಬ್ಬ ಸ್ಟಾರ್ನ ಮಗ ಅಥವಾ ಮಗಳಿಗೆ ಚಿತ್ರರಂಗಕ್ಕೆ ಬರುವುದು ಸುಲಭ. ಅವರಪ್ಪ ಸುಮ್ಮನೆ ಫೋನ್ ಮಾಡಿ, ತನಗೆ ಪರಿಚಯವಿರುವ ದೊಡ್ಡ ನಿರ್ದೇಶಕ ಅಥವಾ ನಿರ್ಮಾಪಕರಿಗೆ ಅವಕಾಶ ಕೊಡಿ ಎಂದು ಕೇಳಬಹುದು. ಹಾಗಂತ ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ನಾಳೆ ಆ ಸ್ಟಾರ್ ಮಕ್ಕಳು ಇಲ್ಲಿ ನೆಲೆಯೂರಬೇಕು ಎಂದರೆ ಯಶಸ್ಸು, ಪ್ರತಿಭೆ ಎಲ್ಲವೂ ಮುಖ್ಯ’ ಎಂದು ಸೋನು ಹೇಳಿದ್ದಾರೆ.
ತಮಿಳಿನ ಖ್ಯಾತ ನಟ ಮತ್ತವರ ತಂದೆಗೂ ಕರೊನಾ ಪಾಸಿಟಿವ್!