ನವದೆಹಲಿ: ದೆಹಲಿ ಜವಾಹರ್ ಲಾಲ್ ಯೂನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಉಮಾಭಾರತಿ, ವಿಶ್ವವಿದ್ಯಾಲಯದ ವಾತಾವರಣವನ್ನು ಮತ್ತಷ್ಟು ವಿಷಪೂರಿತಗೊಳಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾಭಾರತಿ, ನಮ್ಮ ದೇಶದಲ್ಲಿ ಕೆಲವು ವಿಚಾರವಾದಿಗಳು, ಚಿಂತಕರು ಇದ್ದಾರೆ. ಅವರು ಪಕ್ಕಾ ಹಾವಿನಂತೆ. ಒಂದಷ್ಟು ಪ್ರಭೇದದ ಹಾವುಗಳು ಕಡಿಮೆ ಸಂಖ್ಯೆಯಲ್ಲಿ ಇರುತ್ತವೆ. ಆದರೆ ಅತ್ಯಂತ ವಿಷಕಾರಿಯಾಗಿರುತ್ತವೆ. ಈ ಚಿಂತಕರೂ ಹಾಗೇ. ಕಡಿಮೆ ಸಂಖ್ಯೆಯಲ್ಲಿ ಇದ್ದರು ವಿಪರೀತ ವಿಷಕಾರಿಯಾಗಿದ್ದಾರೆ. ಜೆಎನ್ಯುದಲ್ಲಿ ಕೂಡ ವಾತಾವರಣವನ್ನು ಮತ್ತಷ್ಟು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ನಾವು ಅಂತಹವರನ್ನು ಸರಿಪಡಿಸುವ ಅಗತ್ಯವಿದೆ. ಅದನ್ನು ಶೀಘ್ರದಲ್ಲೇ ಮಾಡುತ್ತೇವೆ ಎಂದಿದ್ದಾರೆ.
ಜನವರಿ 5ರಂದು ಸಂಜೆ ಒಂದಷ್ಟು ಮಂದಿ ಮುಸುಕು ಧರಿಸಿ ಜೆಎನ್ಯುಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಸುಮಾರು 34 ಮಂದಿ ಗಾಯಗೊಂಡಿದ್ದರು. ಅದರಲ್ಲೂ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ತಲೆಗೆ ತೀವ್ರ ಏಟಾಗಿತ್ತು.
ಜೆಎನ್ಯು ಹಿಂಸಾಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು ರಾಜಕೀಯ ವ್ಯಕ್ತಿಗಳು, ಗಣ್ಯರು, ಬಾಲಿವುಡ್ ಮಂದಿ ತಮ್ಮದೇ ದೃಷ್ಟಿಕೋನದಲ್ಲಿ ಇದನ್ನು ವಿಶ್ಲೇಷಿಸುತ್ತಿದ್ದಾರೆ.(ಏಜೆನ್ಸೀಸ್)