ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪೊಲೀಸ್ ವರದಿ ಪ್ರಕಾರ ಆತ್ಮಹತ್ಯೆ ಎಂದು ಸಾಬೀತಾದರೂ, ಆ ಆತ್ಮಹತ್ಯೆಗೆ ಕಾರಣವಾಗಿದ್ದೇನು ಎಂಬುದಕ್ಕೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಇದೀಗ ಆ ವರದಿಯ ಅನುಸಾರ ಒಂದಷ್ಟು ಬಹುಮುಖ್ಯ ಮಾಹಿತಿಯನ್ನು ತನಿಖಾ ತಂಡ ಹೊರಹಾಕಿದೆ
ಸುಶಾಂತ್ ಸಿನಿಮಾ ಕರಿಯರ್ ಹಾಳು ಮಾಡಬೇಕೆಂಬ ಉದ್ದೇಶದಿಂದ ಅವರಿಗೆ ಪರೋಕ್ಷವಾಗಿ ಕಿರುಕುಳ ನೀಡಲಾಗುತ್ತಿತ್ತು. ಅವರ ಇಮೇಜ್ಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ಅವರ ಬೆಳವಣಿಗೆ ಸಹಿಸಲಾಗದೇ, ವೃತ್ತಿಜೀವನ ಹಾಳು ಮಾಡಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ತಂಡ ಮಾಹಿತಿ ಸಂಗ್ರಹಿಸಿದೆ.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್ ನಟ…?
ಸುಶಾಂತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಈವರೆಗೂ 27ಕ್ಕೂ ಅಧಿಕ ಮಂದಿಯನ್ನು ಪೊಲೀಸ್ ತಂಡ ವಿಚಾರಣೆ ಮಾಡಿದೆ. ಅದರಲ್ಲಿ ಸ್ನೇಹಿತರು, ಕುಟುಂಬಸ್ಥರು ಮತ್ತು ಸಿನಿಮಾಮಂದಿಯೂ ಒಳಗೊಂಡಿದ್ದಾರೆ. ‘ಕಳೆದ ಕೆಲ ತಿಂಗಳಿಂದ ಸುಶಾಂತ್ ತೀವ್ರ ಒತ್ತಡಕ್ಕೆ ಒಳಗಾಗಿದ್ದ. ಆತನ ಮೇಲೆ ಯಾರೋ ಒತ್ತಡ ಹೇರಿದಂತೆ ಕಾಣುತ್ತಿತ್ತು. ಬೇಕು ಅಂತಲೇ ಅವನನ್ನೇ ಟಾರ್ಗೆಟ್ ಮಾಡಿ, ಅವನ ಬೆಳವಣಿಗೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿರಬೇಕು ಎಂದು ಸುಶಾಂತ್ ಆಪ್ತ ಸ್ನೇಹಿತರು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರಂತೆ.
ಇದನ್ನೂ ಓದಿ: ಸುಶಾಂತ್, ಟಿಕ್ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?
ಅಷ್ಟೇ ಅಲ್ಲ ಸುಶಾಂತ್ ವಿರುದ್ಧ ಒಂದಷ್ಟು ನೆಗೆಟಿವ್ ಸುದ್ದಿಗಳು ಹೊರಬಿದ್ದಿದ್ದು, ಅದರಿಂದಲೂ ತೀರ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಮೊನ್ನೆಯಷ್ಟೇ ಯಶ್ ರಾಜ್ ಫಿಲಂಸ್ನ ಕಾಸ್ಟಿಂಗ್ ಡೈರೆಕ್ಟರ್ ಶಾನೂ ಶರ್ಮಾ ಅವರನ್ನು ವಿಚಾರಣೆ ಮಾಡಲಾಗಿದ್ದು, ಅವರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ. (ಏಜೆನ್ಸೀಸ್)