ಚಮೋಲಿ: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳ ಹೇಮಕುಂಡ್ ಸಾಹಿಬ್ನ ಬಾಗಿಲುಗಳನ್ನು ಭಾರಿ ಹಿಮಪಾತದ ಕಾರಣ ಒಂದು ದಿನ ಮುಂಚಿತವಾಗಿ ಮುಚ್ಚಲಾಗಿದೆ. ‘ಚಮೋಲಿ ಜಿಲ್ಲೆಯಲ್ಲಿ 2 ಅಡಿ ಹಿಮಪಾತ ಆಗಿದೆ. ಗೋವಿಂದ್ಘಾಟ್ ಹಾಗೂ ಗಂಗಾರಿಯಾ ಹಿಮದಲ್ಲಿ ಸಂಪೂರ್ಣ ಮುಚ್ಚಿ ಹೋಗಿರುವ ಕಾರಣ ತೀರ್ಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಜಿಲ್ಲೆಯ ಎಸ್ಪಿ ಶ್ವೇತಾ ಚೌಬೆ ತಿಳಿಸಿದರು.
ಹೇಮಕುಂಡ್ ಸಾಹಿಬ್ ಗುರುದ್ವಾರದ ಬಾಗಿಲನ್ನು ಅಕ್ಟೋಬರ್ 10 ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುವುದು ಎಂದು ಗುರುದ್ವಾರದ ಟ್ರಸ್ಟ್ನ ಉಪಾಧ್ಯಕ್ಷ ನರೇಂದ್ರ ಜೀತ್ ಬಿಂದ್ರಾ ಸೆಪ್ಟೆಂಬರ್ 9ರಂದು ತಿಳಿಸಿದ್ದರು.
ಹೇಮಕುಂಡ್ ಸಾಹಿಬ್ ಗುರುದ್ವಾರವನ್ನು ಜಗತ್ತಿನ ಎಲ್ಲಾ ಮೂಲೆಗಳಿಂದ ಸಾವಿರಾರು ಜನ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಸಂಚರಿಸುವುದು ಅಸಾಧ್ಯ ಆಗಿರುವ ಕಾರಣ ಬೇಸಿಗೆಯಲ್ಲಿ ಮಾತ್ರವೇ ಗುರುದ್ವಾರದ ಬಾಗಿಲನ್ನು ತೆರೆದಿರುತ್ತಾರೆ. ಈ ಗುರುದ್ವಾರವನ್ನು ಉತ್ತರಾಖಂಡದ 5ನೇ ಧಾಮ ಎಂದೂ ಕರೆಯುತ್ತಾರೆ.