ಬೆಂಗಳೂರು: ಬ್ಯಾಟರಾಯನಪುರದ ಕೊಳೆಗೇರಿ ನಿವಾಸಿಯಾಗಿದ್ದ ವಿಶ್ವನಾಥ್ ಇಂದು ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ‘ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ’ (ಕೆಆರ್ಇಡಿಎಲ್) ಕಚೇರಿ ಯಲ್ಲಿ ‘ಡಿ’ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಈ ಯಶಸ್ಸಿಗೆ ಪ್ರಮುಖ ಕಾರಣ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಡಿದ ಸಹಾಯ.
ಗೋಡೆ ಹಾರಿದ್ದ: 10 ವರ್ಷಗಳ ಹಿಂದೆ ಬ್ಯಾಟರಾಯನಪುರದ ಗಾಳಿ ಆಂಜ ನೇಯಸ್ವಾಮಿ ದೇವಸ್ಥಾನಕ್ಕೆ ಮಳೆನೀರು ನುಗ್ಗಿ ದೇವಸ್ಥಾನ ಮುಳುಗಡೆಯಾಗುವ ಸ್ಥಿತಿ ತಲುಪಿತ್ತು. ಅಲ್ಲಿ ಬಿಎಸ್ವೈ ಹೋಗಿದ್ದಾಗ, ತಮ್ಮ ಗುಡಿಸಲಿಗೂ ನೀರು ನುಗ್ಗಿರುವುದನ್ನು ಸಿಎಂಗೆ ತಿಳಿಸಲೆತ್ನಿಸಿದ್ದ. ಭದ್ರತಾ ಅಧಿಕಾರಿಗಳು ತಡೆಯೊಡ್ಡಿದಾಗ, ತಕ್ಷಣ ಬೇರೊಂದು ಗೋಡೆ ಹಾರಿ ಬಿಎಸ್ವೈ ಮುಂದೆ ವಿಶ್ವನಾಥ್ ಹಾಜರಾಗಿದ್ದ. ಸಮಸ್ಯೆ ಆಲಿಸಿದ ಬಿಎಸ್ವೈ, ಸುತ್ತೂರು ಮಠದಲ್ಲಿ ವ್ಯಾಸಂಗ ಮಾಡಲು ವ್ಯವಸ್ಥೆ ಕಲ್ಪಿಸುತ್ತೇನೆ ಹಾಗೂ ಉಚಿತ ಮನೆ ನೀಡುತ್ತೇನೆ ಎಂದು ಭರವಸೆ ನೀಡಿದ್ದರು.
ಫಲ ನೀಡಿದ 2ನೇ ಭೇಟಿ: ಉಚಿತ ಶಿಕ್ಷಣ ಪಡೆದ ವಿಶ್ವನಾಥ್ ಎಸ್ಸೆಸ್ಸೆಲ್ಸಿವರೆಗೂ ಓದಿ ಮತ್ತೆ ಬೆಂಗಳೂರಿಗೆ ಮರಳಿದ್ದ. ಬೌನ್ಸ್ ಕಂಪನಿಗೆ ಕೆಲಸ ಸೇರಿದ್ದ. ಇತ್ತೀಚೆಗೆ ಅದನ್ನು ಬಿಟ್ಟು ಮನೆಯಲ್ಲಿದ್ದ. ಎರಡು ವಾರದ ಹಿಂದೆ ಸಿಎಂ ಭೇಟಿಯಾಗಲು ಅವರ ನಿವಾಸಕ್ಕೆ ಹೋಗಿದ್ದ. ಎರಡು ಬಾರಿ ಹೋದರೂ ಸಿಎಂ ಸಿಕ್ಕಿರಲಿಲ್ಲ. ನಂತರ ಅವರ ಆಪ್ತ ವಲಯದಲ್ಲಿರುವ ಕಾಪು ಸಿದ್ಧಲಿಂಗಸ್ವಾಮಿ ಅವರನ್ನು ಭೇಟಿ ಮಾಡಿ ಹಿಂದಿನ ಘಟನೆಯನ್ನು ವಿವರಿಸಿದ. ತಕ್ಷಣ ಅವನಿಗೆ ‘ಕೆಆರ್ಇಡಿಎಲ್’ನಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದ ವಿಶ್ವನಾಥ್ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ.