ಚಿತ್ರದುರ್ಗ: ನಗರದ ಮನೆಯಲ್ಲಿ ಅಸ್ಥಿ ಪಂಜರಗಳು ದೊರೆತಿರುವ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ ಸ್ವಗ್ರಾಮದಲ್ಲಿ ಅನೇಕರು ಅವರ ಪುತ್ರ ಬಾಬುರೆಡ್ಡಿ (ಎನ್.ಜೆ.ಕೃಷ್ಣ) ಅವರನ್ನು ಮಾತ್ರ ನೋಡಿದ್ದಾರೆ.
ಕೃಷ್ಣ ಅವರು, ಸಂಬಂಧಿಕರಿಗೆ ಬಾಬುರೆಡ್ಡಿ ಎಂದೇ ಅತ್ಯಂತ ಚಿರಪರಿಚಿತರಾಗಿದ್ದರು. ಅವರ ಹೆಸರು ಕೃಷ್ಣ ಎಂದೇ ಗೊತ್ತಾಗಿದ್ದು, ಪ್ರಕರಣ ಬಹಿರಂಗವಾದ ಬಳಿಕ. ಬಾಬುರೆಡ್ಡಿ ಹೊರತುಪಡಿಸಿ ಅವರ ತಂದೆ, ತಾಯಿ ಹಾಗೂ ಉಳಿದವರ ಪರಿಚಯ ಸಂಬಂಧಿಕರಿಗೂ (ನಾಡಿಗ್ ಮನೆತನ) ಅಷ್ಟಾಗಿ ಇರಲಿಲ್ಲ. ಸಂಬಂಧಿಕರ ಪೈಕಿ ಕೆಲವರು ದುರ್ಗದಲ್ಲಿದ್ದ ಜಗನ್ನಾಥರೆಡ್ಡಿ ಮನೆಗೆ ಹೋಗಿ ಬರುತ್ತಿದ್ದರಾದರೂ ಅದು ಕೂಡ ಏಳೆಂಟು ವರ್ಷಗಳ ಹಿಂದೆ.
ಯಾವಾಗ ಮನೆಗೆ ಹೋದವರಿಗೆ ಸರಿಯಾಗಿ ಅವರಿಂದ ಸ್ಪಂದನೆ ಸಿಗಲಿಲ್ಲವೋ ಅಲ್ಲಿಂದ ಒಬ್ಬೊಬ್ಬರಾಗಿ ಜಗನ್ನಾಥ ರೆಡ್ಡಿ ಕುಟುಂಬ ದವರಿಂದ ದೂರ ಉಳಿಯಲು ಆರಂಭಿಸಿದ್ದಾರೆ. ಯಾರಾದರೂ ಸಿಕ್ಕಾಗ ಬಾಬುರೆಡ್ಡಿ ಕೂಡ ಬೆಂಗಳೂರಲ್ಲಿರುತ್ತೇವೆ ಎನ್ನುತ್ತಿದ್ದರಂತೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಏನಾದರೂ ಹಾಜರಾದರೆ ಅದು ಬಾಬುರೆಡ್ಡಿ ಮಾತ್ರವಂತೆ.
ದುರ್ಗದಲ್ಲಿದ್ದ ಮನೆ ಬಳಿಯ ಕಲ್ಯಾಣ ಮಂಟಪಗಳಲ್ಲಿ ಸಮೀಪದ ಬಂಧುಗಳ ಮದುವೆಗಳಿಗೂ ಇವರಾರು ಹಾಜರಾಗುತ್ತಿರಲಿಲ್ಲ. ಸಮಾಜದಿಂದ ದೂರವುಳಿಯುತ್ತಾ ಹೋದ ಇವರ ನಡೆಯಿಂದ ಬೇಸರ ಹೊಂದಿದ್ದ ಸಂಬಂಧಿಕರು, ಮನೆತನದವರ ಕಷ್ಟ ಸುಖದಲ್ಲಿ ಬೇರೆಯವರು ಕಾಣಿಸದಿದ್ದರೆ ಯಾಕೆ ನೀವು ಅವರಂತೆ ಆಗುತ್ತಿದ್ದೀರಿ? ಎಂದು ಕೇಳುತ್ತಿದ್ದರಂತೆ.
ಉತ್ತಮ ತೋಟ ಕಟ್ಟಿದ್ದ ಬಾಬುರೆಡ್ಡಿ
ಬಾಬುರೆಡ್ಡಿ ಅವರು ಡಿಎಸ್ಹಳ್ಳಿಯಲ್ಲಿ ಕೆಲವು ವರ್ಷಗಳ ಹಿಂದೆ ಉತ್ತಮ ತೋಟ ನಿರ್ಮಿಸಿದ್ದರು. ತೆಂಗು,ಮಾವು ಇತ್ಯಾದಿ ಬೆಳೆ ಯೊಂದಿಗೆ ಒಳ್ಳೆ ಹೈನುಗಾರಿಕೆ ನಡೆಸುತ್ತಿದ್ದರು. ಇಷ್ಟೆಲ್ಲ ಇದ್ದು ಯಾಕೆ ಹೀಗಾಯಿತು? ಎಲ್ಲರ ಸಾವು ಯಾರಿಗೂ ಯಾಕೆ ಗೊತ್ತಾಗಲಿಲ್ಲವಲ್ಲ ಎಂಬ ಕೊರಗು ಹಾಗೂ ಪ್ರಶ್ನೆ ಅನೇಕರನ್ನು ಕಾಡಿದೆ.
ಕುಡುಕರ ಅಡ್ಡೆ
ದುರ್ಗದ ಪಾಳು ಬಿದ್ದ ಮನೆ ಮೇಲೆ ಹಲವರು ಮದ್ಯ ಸೇವಿಸುತ್ತಿದ್ದರಂತೆ. ಮನೆಯಲ್ಲಿ ಸಾಕಷ್ಟು ಪಾತ್ರೆ,ಫ್ಯಾನ್ ಮೊದಲಾದ ವಸ್ತು ಗಳು ಈಗಾಗಲೇ ಕಳ್ಳರ ಪಾಲಾಗಿವೆ. ಎಸಿಯೂ ಇತ್ತಂತೆ.