ಸಿರವಾರ: ಸರ್ಕಾರಿ ನೌಕರರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಆದರೆ ಸಾಧನೆಗೈದ ನೌಕರರ ಮಕ್ಕಳನ್ನು ಗುರುತಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ವಿಜಯೇಂದ್ರ ಎಸ್.ಹುಲಿನಾಯಕ ಹೇಳಿದರು.
ಪಟ್ಟಣದ ಈಶ್ವರ ದೇಗುಲ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆ ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರು ಒಗ್ಗಟ್ಟಾಗಿರುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಾಮಾಜಿಕ ಕಾರ್ಯಗಳೊಂದಿಗೆ ಮಾದರಿಯಾಗಬೇಕು. ನಿವೃತ್ತಿ ನೌಕರರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಮಾಡಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಮಾಜಿ ಸೈನಿಕರಾದ ಕ್ಯಾ.ವಿರೂಪಾಕ್ಷಿ ಸಾಹುಕಾರ್ ನೀಲಗಲ್, ಮಲ್ಲಯ್ಯ ವಿಜೇಂದ್ರರನ್ನು ಸನ್ಮಾನಿಸಲಾಯಿತು. ಸಂಘದ ಸಿರವಾರ ತಾಲೂಕು ಅಧ್ಯಕ್ಷ ಅಯ್ಯನಗೌಡ ಐರೆಡ್ಡಿ, ಉಪ ತಹಸೀಲ್ದಾರ್ ಸಿದ್ದನಗೌಡ, ಬಿಇಒ ಚಂದ್ರಶೇಖರ ದೊಡ್ಡಮನಿ, ಸಿಡಿಪಿಒ ಮುದಕಪ್ಪ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ವೈದ್ಯಾಧಿಕಾರಿ ಪರಿಮಳಾ ಮೈತ್ರಿ, ಮೌನೇಶ, ಹಂಪಣ್ಣ ಚನ್ನೂರು, ಡಿ.ಸುರೇಶ ಇದ್ದರು.