ಸಿರವಾರ: ತಾಲೂಕಿನಲ್ಲಿ ಗುರುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಕೆಲ ರೈತರಿಗೆ ಮಳೆ ವರವಾದರೆ, ಇನ್ನು ಕೆಲವರಿಗೆ ಶಾಪವಾಗಿದೆ. ಕೆಲ ಬೆಳೆಗಳಿಗೆ ನೀರಿನ ಅಗತ್ಯವಿತ್ತು. ಭತ್ತದ ಗದ್ದೆಗಳಿಗೆ ಅನೇಕ ರೈತರು ರಸಗೊಬ್ಬರ ಹಾಕಿದ್ದು, ಮಳೆಯಿಂದಾಗಿ ರಸಗೊಬ್ಬರ ಹಾಕಿದ್ದು ವ್ಯರ್ಥವಾಗಿದೆ.
ತಾಲೂಕಿನ ಅನೇಕ ಹಳ್ಳಗಳು ತುಂಬಿ ಹರಿದಿವೆ ಇದರಿಂದ ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಸಿರವಾರ-ಮಾನ್ವಿ ರಸ್ತೆಯಲ್ಲಿರುವ ಹಳ್ಳಿಹೊಸೂರು ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಕೆಲ ಕಾಲ ಸಂಚಾರಕ್ಕೆ ತೊಂದರೆ ಆಗಿತ್ತು. ಇನ್ನು ಕೆಲವರು ಜೀವ ಭಯದಲ್ಲಿ ವಾಹನಗಳನ್ನು ಹಳ್ಳದ ಮೇಲೆ ಚಲಾಯಿಸಿಕೊಂಡು ಹೋದರು. ಕಡದಿನ್ನಿ ಗ್ರಾಮದ ಸಂಪರ್ಕ ರಸ್ತೆಯಲ್ಲಿರುವ ಹಳ್ಳಕ್ಕೂ ಹೆಚ್ಚಿನ ನೀರು ಹರಿದು ಬಂದಿರುವುದರಿಂದ ಜನರು ಜೀವ ಭಯದಲ್ಲಿ ಓಡಾಡುವಂತಾಗಿತ್ತು. ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಹಳ್ಳದ ಪಕ್ಕದಲ್ಲಿರುವ ಭತ್ತದ ಹಾಗೂ ಇತರ ಬೆಳೆಗಳು ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿವೆ.